ದೇಶ

25 ಸಾವಿರ ರೂ. ಹಣ ನೀಡಿ ಸಾವಿನ ದ್ವೀಪಕ್ಕೆ ತೆರಳಿದ್ದ ಅಮೆರಿಕ ಪ್ರವಾಸಿಗ!

Srinivasamurthy VN
ಪೋರ್ಟ್ ಬ್ಲೇರ್: ಅಂಡಮಾನ್ ಮತ್ತು ನಿಕೋಬಾರ್ ನಲ್ಲಿ ಅಮೆರಿಕ ಪ್ರವಾಸಿಗನ ಕೊಲೆ ಪ್ರಕರಣ ಇದೀಗ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಉದ್ಜೇಶಪೂರ್ವಕವಾಗಿಯೇ ಪ್ರವಾಸಿಗ ಜಾನ್ ಅಲೆನ್ ಚೌ ಸೆಂಟಿನೆಲ್ ದ್ವೀಪಕ್ಕೆ ತೆರಳಿದ್ದನಂತೆ.
ಹೌದು.. ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ಸಾಹಸಯಾತ್ರೆ ಕೈಗೊಂಡಿದ್ದ ಅಮೆರಿಕ ಪ್ರಜೆಯೊಬ್ಬ ಅಕ್ರಮವಾಗಿ ಅಂಡಮಾನ್ ದ್ವೀಪದೊಳಗೆ ಪ್ರವೇಶಿಸಿದ್ದು, ಸೆಂಟಿನಲೀಸ್ ಬುಡಕಟ್ಟು ಜನರು ಆತನನ್ನು ಕೊಂದು ಹಾಕಿದ್ದಾರೆ. ಈ ಸಂಬಂಧ ಅಂಡಮಾನ್ ಮತ್ತು ನಿಕೋಬಾರ್ ಪೊಲೀಸರು 7 ಮಂದಿ ಮೀನುಗಾರರನ್ನು ಬಂಧಿಸಿದ್ದು, ಈ ಮೀನುಗಾರರೇ ಅಮೆರಿಕದ ಪ್ರವಾಸಿಗ ಜಾನ್ ಅಲೆನ್ ಚೌ ನನ್ನು ಬೋಟ್ ಮೂಲಕ ಸೆಂಟಿನೆಲ್ ದ್ವೀಪಕ್ಕೆ ಕರೆದೊಯ್ದಿದ್ದರು ಎನ್ನಲಾಗಿದೆ.
ಆದರೆ ಪ್ರಸ್ತುತ ವಿಚಾರಣೆ ವೇಳೆ ಬಂಧಿತ ಮೀನುಗಾರರು ಬಾಯಿ ಬಿಟ್ಟಿರುವ ಅಂಶಗಳು ಎಲ್ಲರ ಕುತೂಹಲಕ್ಕೆ ಕಾರಣವಾಗಿದ್ದು, ಪ್ರವಾಸಿಗ ಜಾನ್ ಅಲೆನ್ ಚೌ ಉದ್ದೇಶಪೂರ್ವಕವಾಗಿಯೇ ಆ ಸಂರಕ್ಷಿತ ದ್ವೀಪಕ್ಕೆ ತೆರಳಿದ್ದನಂತೆ. ಇದಕ್ಕಾಗಿ ಮೀನುಗಾರರಿಗೆ 25 ಸಾವಿರ ರೂ ಹಣ ಕೂಡ ನೀಡಿದ್ದನಂತೆ. ಜಾನ್ ಅಲೆನ್ ಚೌ ನನ್ನು ಅಪಾಯಕಾರಿ ದ್ವೀಪಕ್ಕೆ ಕರೆದೊಯ್ಯಲು ಮೀನುಗಾರರು ಆರಂಭದಲ್ಲಿ ನಿರಾಕರಿಸಿದರಾದರೂ ಆತ ಮೀನುಗಾರರಿಗೆ ಹಣ ಆಮಿಷ ಒಡ್ಡಿ ಬಲವಂತವಾಗಿ ದ್ವೀಪಕ್ಕೆ ತೆರಳಲು ಮನವಿ ಮಾಡಿದ್ದನಂತೆ.
ನವೆಂಬರ್ 16ರಂದು ಜಾನ್ ಅಲೆನ್ ಚೌ ನನ್ನು 7 ಮಂದಿ ಮೀನುಗಾರರು ಆ ದ್ವೀಪಕ್ಕೆ ಬಿಟ್ಟು ವಾಪಸ್ ಆಗಿದ್ದಾರೆ. ಆದರೆ ಮರು ಕ್ಷಣದಲ್ಲೇ ಬುಡಕಟ್ಟು ಸಮುದಾಯದವರು 27 ವರ್ಷದ  ಜಾನ್ ಅಲೆನ್ ಚೌ ಮೇಲೆ ಬಿಲ್ಲುಬಾಣಗಳಿಂದ ಹಲ್ಲೆ ಮಾಡಿ ಕೊಂದು ಹಾಕಿದರು. ಅಲ್ಲದೆ ಮೀನುಗಾರರು ನೋಡುತ್ತಿದ್ದಂತೆಯೇ ಆತನ ದೇಹವನ್ನು ಕಡಲಕಡೆ ಎಳೆದೊಯ್ದರು ಎಂದು ಮೀನುಗಾರರು ಮಾಹಿತಿ ನೀಡಿದ್ದಾರೆ.
ಇನ್ನು ಜಾನ್ ಅಲೆನ್ ಚೌ ಮೃತದೇಹ ಇನ್ನೂ ಪತ್ತೆಯಾಗಿಲ್ಲವಾದರೂ ಹೆಲಿಕಾಪ್ಟರ್ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತಿದೆ. ಇನ್ನು ಆ ದ್ವೀಪದಲ್ಲಿ ಹೆಲಿಕಾಪ್ಟರ್ ಇಳಿಸುವುದು ಕೂಡ ಅಪಾಯಕಾರಿ. ಏಕೆಂದರೆ ಸೆಂಟಿನಿಲಿಗಳನ್ನು ಸಂಪರ್ಕಿಸಲು ಯತ್ನಿಸಿದರೆ ಪ್ರತಿಯಾಗಿ ಏನು ಬೇಕಾದರೂ ಮಾಡಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹ ಬಹಳ ಸೂಕ್ಷ್ಮವಾದ ಪ್ರದೇಶ. ಇಲ್ಲಿ ಪ್ರವೇಶಿಸುವುದಕ್ಕೆ ಪೂರ್ವಾನುಮತಿ ಅಗತ್ಯ. ಬುಡಕಟ್ಟು ಸಮುದಾಯದ ಸಂರಕ್ಷಣೆ ಮಾತ್ರವಲ್ಲ, ಸೈನ್ಯಕ್ಕೆ ಸಂಬಂಧಿಸಿದ ಮುಖ್ಯವಾದ ನಿಯೋಜನೆ ಇಲ್ಲಿ ಮಾಡಲಾಗಿದೆ.
SCROLL FOR NEXT