ಭೋಪಾಲ್: ಅತಿಯಾದ ಓಲೈಕೆ ಹಾಗೂ ಹಿಂದೂಗಳನ್ನು ಕಡೆಗಣಿಸುತ್ತಿರುವ ಆರೋಪ ಎದುರಿಸುತ್ತಿರುವ ಕಾಂಗ್ರೆಸ್ ಪಕ್ಷ ಈಗ ಅದರಿಂದ ಹೊರಬರಲು ಯತ್ನಿಸುತ್ತಿದೆ. ಇತ್ತೀಚಿನ ದಿನಗಳಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ದೇವಾಲಯಗಳಿಗೆ ಹೆಚ್ಚು ಭೇಟಿ ನೀಡುತ್ತಿದ್ದು ಬಿಜೆಪಿಯ ತಂತ್ರಗಾರಿಕೆಗೆ ಪ್ರತಿ ತಂತ್ರ ಹೆಣೆಯುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಹೊಸ ವಿಷಯ ಏನಪ್ಪ ಅಂದ್ರೆ ರಾಮ ಮಂದಿರ ನಿರ್ಮಾಣಕ್ಕೆ ಕಾಂಗ್ರೆಸ್ ವಿರೋಧ ಇಲ್ಲವಂತೆ.
ಹೌದು, ಈ ವಿಷಯವನ್ನು ಖುದ್ದು ಉತ್ತರ ಪ್ರದೇಶ ಕಾಂಗ್ರೆಸ್ ನಾಯಕ ರಾಜ್ ಬಬ್ಬರ್ ಸ್ಪಷ್ಟಪಡಿಸಿದ್ದು, ಕಾಂಗ್ರೆಸ್ ರಾಮ ಮಂದಿರ ನಿರ್ಮಾಣವನ್ನು ಎಂದಿಗೂ ವಿರೋಧಿಸಿರಲಿಲ್ಲ ಎಂದಿದ್ದಾರೆ. "ಕಾಂಗ್ರೆಸ್ ಪಕ್ಷ ರಾಮ ಮಂದಿರ ನಿರ್ಮಾಣವನ್ನು ಎಂದಿಗೂ ವಿರೋಧಿಸಿರಲಿಲ್ಲ. ಈಗ ಮುಸ್ಲಿಂ ಸಮುದಾಯಕ್ಕೂ ರಾಮ ಮಂದಿರ ಬೇಕೆಂದು ತಮಗನ್ನಿಸುತ್ತಿದೆ" ಎಂದು ರಾಜ್ ಬಬ್ಬರ್ ಹೇಳಿದ್ದಾರೆ.
ರಾಮ ಮಂದಿರ ನಿರ್ಮಾಣದ ವಿಷಯದಲ್ಲಿ ಸುಪ್ರೀಂ ಕೋರ್ಟ್ ನಿರ್ಧಾರ ತೆಗೆದುಕೊಳ್ಳಲಿದೆ. ಆದರೆ ಬಿಜೆಪಿ ಮಾತ್ರ ಪ್ರತಿ ಚುನಾವಣೆಯಲ್ಲಿಯೂ ರಾಮ ಮಂದಿರ ವಿಷಯವನ್ನು ಮುನ್ನೆಲೆಗೆ ತರುತ್ತದೆ. ಬಿಜೆಪಿ ರಾಮನೆಡೆಗೆ ಎಂದಿಗೂ ವಿಶೇಷ ಭಾವನೆ ಹೊಂದಿರಲಿಲ್ಲ. ಚುನಾವಣೆ ಸಂದರ್ಭದಲ್ಲಿ ಮಾತ್ರ ರಾಮ, ರಾಮ ಮಂದಿರದ ಹೆಸರಿನಲ್ಲಿ ಮತ ಕೇಳುತ್ತದೆ ಎಂದು ರಾಜ್ ಬಬ್ಬರ್ ಆರೋಪಿಸಿದ್ದಾರೆ.
ರಾಮನ ಹೆಸರಿನಲ್ಲಿ ಬಿಜೆಪಿ ಮೋಸ ಮಾಡುತ್ತಿದೆ ಎಂಬುದನ್ನು ಮತದಾರರೂ ಅರಿತುಕೊಂಡಿದ್ದಾರೆ. ರಾಮ ಮಂದಿರ ನಿರ್ಮಾಣವನ್ನು ಕಾಂಗ್ರೆಸ್ ಹಿಂದೆಯೂ ವಿರೋಧಿಸಿರಲಿಲ್ಲ. ಮುಂದೆಯೂ ವಿರೋಧಿಸುವುದಿಲ್ಲ ಎಂದು ರಾಜ್ ಬಬ್ಬರ್ ಮಧ್ಯಪ್ರದೇಶ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಸ್ಪಷ್ಟಪಡಿಸಿದ್ದಾರೆ.