ಚೆನ್ನೈ: ಅಕ್ರಮ ಸಂಬಂಧ ಅಪರಾಧವಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಬೆನ್ನಲ್ಲೇ ಪತಿಯ ಅನೈತಿಕ ಸಂಬಂಧದಿಂದ ಬೇಸತ್ತ ಪತ್ನಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ತನ್ನ ಪತಿ ಬೇರೊಬ್ಬಳೊಡನೆ ಸಂಬಂಧ ಹೊಂದಿರುವುದನ್ನು ಅರಿತು ಬೇಸರಗೊಂಡ ಪುಷ್ಪಲತಾ (24) ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಮನೆಯವರ ವಿರೋಧದ ನಡುವೆ ತಾನು ಪ್ರೀತಿಸಿದ್ದ ಜಾನ್ ಪೌಲ್ ಫ್ರಾಂಕ್ಲಿನ್ (27) ಎನ್ನುವಾತನೊಡನೆ ಎರಡು ವರ್ಷದ ಹಿಂದೆ ಪುಷ್ಪಲತಾ ವಿವಾಹಿಕವಾಗಿದ್ದಳು.
ಪರಸ್ಪರರ ನಡುವೆ ಪ್ರೀತಿ ವಿಶ್ವಾಸವಿದ್ದು ಪ್ರಾರಂಭದಲ್ಲಿ ದಾಂಪತ್ಯ ಜೀವನ ಸಹಜವಾಗಿಯೇ ಸಾಗಿತ್ತು. ದಂಪತಿಗಳಿಗೆ ಒಂದು ಮಗುವಾಗಿದ್ದು ಮಗುವಾದ ಸ್ವಲ್ಪದರಲ್ಲೇ ಆಕೆಗೆ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ.
ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆ ಪಡೆಯುತ್ತಿದ್ದ ಪುಷ್ಪಲತಾಳಿಂದ ಕ್ರಮೇಣ ಪತಿ ಫ್ರಾಂಕ್ಲಿನ್ ದೂರಾಗತೊಡಗಿದ್ದ.
ಪತಿಗೆ ಬೇರೊಬ್ಬಳೊಡನೆ ಸಂಬಂಧವಿದೆ ಎಂದು ಅರಿತ ಪತ್ನಿ ಪುಷ್ಪಲತಾ ಅವನೊಂದಿಗೆ ಜಗಳವಾಡಿದ್ದಳು. ಆದರೆ ಮೊನ್ನೆ ಸುಪ್ರೀಂ ಕೋರ್ಟ್ ತೀರ್ಪು ಬಂದ ಬಳಿಕ ಪತಿ ಅದೇ ತೀರನ್ನು ಉಲ್ಲೇಖಿಸಿ ವಾದಿಸಿದ್ದಾನೆ. ನಾನು ಯಾರೊಡನೆ ಸಂಬಂಧ ಇರಿಸಿಕೊಂಡರೂ ಅದನ್ನು ಪ್ರಶ್ನಿಸುವುದಕ್ಕೆ ನಿನಗೆ ಅಧಿಕಾರವಿಲ್ಲ, ಇದನ್ನು ತಡೆಯುವ ಹಕ್ಕು ನಿನಗಿಲ್ಲ ಎಂದಿದ್ದಾನೆ.
ಈ ಮಾತುಗಳಿಂದ ಬೇಸತ್ತ ಪುಷ್ಪಲತಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಘಟನೆ ಕುರಿತಂತೆ ಚೆನ್ನೈನ ಎಂಜಿಆರ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos