ಢಾಕಾ: ಎನ್ ಆರ್ ಸಿ ಪಟ್ಟಿಯಿಂದ ಕೈಬಿಟ್ಟ ಜನರನ್ನು ಗಡಿಪಾರು ಮಾಡುವುದಿಲ್ಲ ಎಂದು ಬಾಂಗ್ಲಾ ಪ್ರಧಾನಿ ಶೇಕ್ ಹಸೀನಾಗೆ ಸ್ವತಃ ಭಾರತದ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರಂತೆ.
ಭಾರತದಲ್ಲಿ ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಅಸ್ಸಾಂ ನ ನೈಜ ಪೌರರು ಮತ್ತು ಅಕ್ರಮ ವಲಸಿಗರನ್ನು ಪತ್ತೆ ಮಾಡುವ ಎನ್ ಆರ್ ಸಿ ಯೋಜನೆಗೆ ಕೇಂದ್ರ ಸರ್ಕಾರ ಚಾಲನೆ ನೀಡುತ್ತಿದ್ದಂತೆಯೇ ಈ ಬಗ್ಗೆ ಚರ್ಚೆಗಳು ನಡೆದಿದ್ದವು. ಈಗ ಬಾಂಗ್ಲಾದೇಶದ ಉನ್ನತ ಅಧಿಕಾರಿಯೊಬ್ಬರು ಬಾಂಗ್ಲಾ ಅಕ್ರಮ ವಲಸಿಗರ ಕುರಿತು ಪ್ರತಿಕ್ರಿಯೆ ನೀಡಿದ್ದು, ಎನ್ ಆರ್ ಸಿ ಪಟ್ಟಿಯಿಂದ ಕೈಬಿಟ್ಟ ಜನರನ್ನು ಗಡಿಪಾರು ಮಾಡುವುದಿಲ್ಲವೆಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೇ ಶೇಖ್ ಹಸೀನಾಗೆ ಭರವಸೆ ನೀಡಿದ್ದಾರೆ ಎಂಬ ಹೇಳಿಕೆ ನೀಡಿ ಅಚ್ಚರಿ ಮೂಡಿಸಿದ್ದಾರೆ.
ಜು.30 ರಂದು ಕೇಂದ್ರ ಸರ್ಕಾರ ಎನ್ ಆರ್ ಸಿ ಬಗ್ಗೆ ಮಾಹಿತಿ ನೀಡಿ, 40 ಲಕ್ಷ ಜನರನ್ನು ಎನ್ ಆರ್ ಸಿ ಪಟ್ಟಿಯಿಂದ ಹೊರಗಿಡಲಾಗಿದೆ ಎಂದು ಹೇಳಿತ್ತು. "ಎನ್ ಆರ್ ಸಿ ಪಟ್ಟಿಯಿಂದ ಹೊರಗಿಡಲಾಗುವವರನ್ನು ಬಾಂಗ್ಲಾಗೆ ಗಡಿಪಾರು ಮಾಡುವುದಿಲ್ಲ ಎಂದು ಪ್ರಧಾನಿ ಮೋದಿಯೇ ನಮಗೆ ಭರವಸೆ ನೀಡಿದ್ದಾರೆ, ಬಾಂಗ್ಲಾದಲ್ಲಿ ವರ್ಷಾಂತ್ಯಕ್ಕೆ ಸಾರ್ವತ್ರಿಕ ಚುನಾವಣೆ ನಡೆಯಲಿದೆ, ಈ ಸಂದರ್ಭದಲ್ಲಿ ಬಾಂಗ್ಲಾ ಅಕ್ರಮ ವಲಸಿಗರನ್ನು ಗಡಿಪಾರು ಮಾಡಿ ಅಸ್ಥಿರತೆ ಉಂಟುಮಾಡುವುದಿಲ್ಲ ಎಂದು ಭಾರತ ನಮಗೆ ನಿರಂತರ ಭರವಸೆ ನೀಡಿದೆ ಎಂದು ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಅವರ ರಾಜಕೀಯ ಸಲಹೆಗಾರರಾದ ಹೆಚ್ ಟಿ ಇಮಾಮ್ ಪಿಟಿಐ ಸಂದರ್ಶನದಲ್ಲಿ ಹೇಳಿದ್ದಾರೆ.
ಬಾಂಗ್ಲಾ ಅಕ್ರಮ ವಲಸಿಗರ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್, ಅಸ್ಸಾಂ ಎನ್ ಆರ್ ಸಿ ಪಟ್ಟಿಯಲ್ಲಿ ಅಕ್ರಮ ಬಾಂಗ್ಲಾ ವಲಸಿಗರನ್ನು ಗುರುತಿಸಲಾಗುತ್ತದೆ. ನಂತರ ಅವರಿಗೆ ಸರ್ಕಾರಿ ಸೌಲಭ್ಯ, ಮತದಾನದ ಹಕ್ಕನ್ನು ಸ್ಥಗಿತಗೊಳಿಸಲಾಗುತ್ತದೆ. ಆ ಬಳಿಕ ಅವರನ್ನು ಗಡಿಪಾರು ಮಾಡಲಾಗುತ್ತದೆ ಎಂದಿದ್ದರು.