ತಿರುಚಿ ವಿಮಾನ ನಿಲ್ದಾಣದ ಗೋಡೆಗೆ ಅಪ್ಪಳಿಸಿದ ಏರ್ ಇಂಡಿಯಾ ಎಕ್ಸ್'ಪ್ರೆಸ್: 136 ಮಂದಿ ಪ್ರಾಣಾಪಾಯದಿಂದ ಪಾರು
ಚೆನ್ನೈ: ದುಬೈಗೆ ತೆರಳುತ್ತಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನವೊಂದು ಸರಹದ್ದು ಗೋಡೆಗೆ ಅಪ್ಪಳಿಸಿರುವ ಘಟನೆಯೊಂದು ತಮಿಳುನಾಡಿನ ತಿರುಚಿ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ದುಬೈ-ತಿರುಚಿ ಮಾರ್ಗದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ತಮಿಳುನಾಡಿನ ತಿರುಚಿ ವಿಮಾನ ನಿಲ್ದಾಣದಿಂದ ಇಂದು ಬೆಳಗಿನ ಜಾವ 1.20ರ ಸುಮಾರಿಗೆ ಮೇಲೇರಲು ರನ್'ವೇನಲ್ಲಿ ತೆರಳುತ್ತಿದ್ದಾಗ ಮುಂದಿನ ಚಕ್ರವು ಸರಹದ್ದು ಗೋಡೆಗೆ ಬಡಿದಿದೆ. ವಿಮಾನದಲ್ಲಿ 130 ಪ್ರಯಾಣಿಕರು ಹಾಗೂ 6 ಮಂದಿ ಸಿಬ್ಬಂದಿಗಳಿದ್ದರು.
ವಿಮಾನ ಗೋಡೆಗೆ ಬಡಿದಿದ್ದರೂ ಅದೃಷ್ಟವಶಾತ್ ಯಾವುದೇ ಸಾವು-ನೋವುಗಳು ಸಂಭವಿಸಿಲ್ಲ. ಎಲ್ಲರೂ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆ ಬಳಿಕ ವಿಮಾನವನ್ನು ಮುಂಬೈ ಮಾರ್ಗಕ್ಕೆ ತಿರುಗಿಸಲಾಗಿದೆ. ಬಳಿಕ ಪ್ರಯಾಣಿಕರಿಗೆ ಬೇರೊಂದು ವಿಮಾನದ ಮೂಲಕ ಪ್ರಯಾಣಕ್ಕೆ ಅನುಕೂಲ ಮಾಡಿಕೊಡಲಾಗಿದೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ತನಿಖೆಗೆ ಆದೇಶಿಸಿದೆ.
ಹಾನಿಗೊಳಗಾಗಿದ್ದರೂ 3 ಗಂಟೆಗಳ ಕಾಲ ಹಾರಾಟ ನಡೆಸಿದ್ದ ವಿಮಾನ!
ಘಟನೆ ಬಳಿಕ ವಾಯು ಸಾರಿಗೆ ನಿಯಂತ್ರಣ ಕೊಠಡಿ ಪೈಲಟ್ ಸಂಪರ್ಕಿಸಿದ್ದು, ವಿಮಾನಕ್ಕೆ ಯಾವುದೇ ಹಾನಿಯಾಗಿಲ್ಲ, ಕಾರ್ಯನಿರ್ವಹಿಸುತ್ತಿದೆ ಎಂದು ಪೈಲಟ್ ತಿಳಿಸಿದ್ದಾರೆ.
ಬಳಿಕ ದುಬೈಗೆ ತೆರಳಬೇಕಿದ್ದ ವಿಮಾನ ಹಾರಾಟವನ್ನು ಮುಂಬೈಗೆ ತಿರುಗಿಸಲಾಗಿದೆ. ಇದರಂತೆ 5.35ರ ಸುಮಾರಿಗೆ ಮುಂಬೈಗೆ ವಿಮಾನ ತೆರಳಿದೆ. ಆದರೆ, ಈ ವೇಳೆ ವಿಮಾನ ಪರಿಶೀಲನೆ ನಡೆಸಿದ ಅಧಿಕಾರಿಗಳಿಗೆ ದಿಗ್ಭ್ರಾಂತಿಯಾಗಿದೆ.
ವಿಮಾನದ ಹಲವು ಭಾಗಗಳು ಬಿರುಕು ಬಿಟ್ಟಿರುವುದು ಕಂಡು ಬಂದಿದೆ. ವಿಮಾನದ ಆಂಟೆನಾ ಮುರಿದು ಹೋಗಿರುವುದು ಕಂಡು ಬಂದಿದೆ. ಭಾರೀ ಪ್ರಮಾಣದಲ್ಲಿ ಹಾನಿಗೊಳಗಾಗಿದ್ದರೂ ವಿಮಾನ 3 ಗಂಟೆಗಳ ಹಾರಾಟ ನಡೆಸಿರುವುದು ಎಲ್ಲರಲ್ಲೂ ಆಶ್ಚರ್ಯವನ್ನುಂಟು ಮಾಡಿದೆ.
ಘಟನೆ ಸಂಬಂಧ ವಿಮಾನಯಾನ ಸಚಿವಾಲಯದ ಅಧಿಕಾರಿಗಳು ತನಿಖೆ ನಡೆಸಲು ನಿರ್ಧರಿಸಿದೆ. ವಿಮಾನ ಐಎಲ್ಎಲ್ (ಇನ್ಟ್ರುಮೆಂಟೇಶನ್ ಲ್ಯಾಂಡಿಂಗ್ ಸಿಸ್ಟಮ್) ಆ್ಯಂಟೆನಾವನ್ನು ಶೀಘ್ರದಲ್ಲಿಯೇ ಬದಲಿಸಲಾಗುತ್ತದೆ ಎಂದು ವಿಮಾನಯಾನ ಸಚಿವಾಲಯದ ಡಿಜಿ ಹೇಳಿದ್ದಾರೆ.
ಘಟನೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ವಿಮಾನಯಾನ ಸಚಿವ ಸುರೇಶ್ ಪ್ರಭು ಅವರು, ಘಟನೆ ಕುರಿತಂದೆ ಕಾರ್ಯದರ್ಶಿಗಳು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗಿದೆ. ಈಗಾಗಲೇ ಉನ್ನತ ಮಟ್ಟದ ತನಿಖೆಗೂ ಆದೇಶಿಸಲಾಗಿದೆ. ಡಿಜಿಸಿಎ ಅಧಿಕಾರಿಗಳು ಘಟನಾ ಸ್ಥಳಕ್ಕೆ ತೆರಳಿದ್ದು, ಪ್ರಾಥಮಿಕ ತನಿಖೆ ನಡೆಸುತ್ತಿದ್ದಾರೆಂದು ಹೇಳಿದ್ದಾರೆ.
ಏರ್ ಇಂಡಿಯಾ ಕೂಡ ಸಮಿತಿಯೊಂದನ್ನು ರಚಿಸಿದ್ದು, ಸುರಕ್ಷತೆಗೆ ಸಂಬಂಧಿಸಿದ ವಿಚಾರಗಳ ಕುರಿತಂತೆ ಪರಿಶೀಲನೆ ನಡೆಸುತ್ತಿದೆ. ವಿಮಾನಯಾನ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು 'ಸುರಕ್ಷತೆ ಅನುಸರಣಾ ವರದಿ'ಯನ್ನು ಪ್ರತೀ ವಿಮಾನವೂ ಪ್ರತೀನಿತ್ಯ ಸಿದ್ಧಪಡಿಸುವಂತೆಯೂ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದೇನೆಂದು ತಿಳಿಸಿದ್ದಾರೆ.
ಘಟನೆ ಕುರಿತಂತೆ ಏರ್ ಇಂಡಿಯಾ ಎಕ್ಸ್ ಪ್ರೆಸ್ ಪ್ರತಿಕ್ರಿಯೆ ನೀಡಿದ್ದು, ಘಟನೆ ಕುರಿತಂತೆ ಡಿಜಿಸಿಎಗೆ ಮಾಹಿತಿ ನೀಡಲಾಗಿದೆ. ಮುಂಬೈ ವಿಮಾನ ನಿಲ್ದಾಣದಲ್ಲಿ ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಇಳಿಸಲಾಗಿದೆ. ಮುಂಬೈಗೆ ತೆರಳಿದ ಬಳಿಕ ಪ್ರಯಾಣಿಕರಿಗೆ ದುಬೈಗೆ ತೆರಳಲು ಬೇರೆಂದು ವಿಮಾನ ವ್ಯವಸ್ಥೆಯನ್ನು ಮಾಡಲಾಗಿತ್ತು ಎಂದು ತಿಳಿಸಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos