ನವದೆಹಲಿ: ಭಾರತ ಸ್ವಾತಂತ್ರ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಮರಣ ಹೊಂದಿದ್ದಾರೆಯೆ ಅಥವಾ ಜೀವದಿಂದಿದ್ದಾರೆಯೆ ಎನ್ನುವ ಕುರಿತು ವಿವರಣೆ ಕೇಳಿ ಆರ್ತೀಐ ಕಾರ್ಯಕರ್ತರು ಪ್ರಧಾನಿ ಕಛೇರಿಗೆ ಅರ್ಜಿ ಹಾಕಿದ್ದು ಇದಕ್ಕೆ "ನ್ಯಾಯಯುತ" ಪ್ರತಿಕ್ರಿಯೆಯನ್ನು ನೀಡಬೇಕೆಂದು ಕೇಂದ್ರ ಮಾಹಿತಿ ಆಯೋಗವು ರಾಷ್ಟ್ರೀಯ ಪತ್ರಾಗಾರಕ್ಕೆ ಸೂಚಿಸಿದೆ.
ಆರ್ಟಿಐ ಕಾರ್ಯಕರ್ತರಾದ ಅವದೇಶ್ ಕುಮಾರ್ ಚತುರ್ವೇದಿ 2015 ಮತ್ತು 2016ರಲ್ಲಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನದಂದು ಪ್ರಧಾನಿಗಳೇಕೆ ಅವರಿಗೆ ಗೌರವ ಸಲ್ಲಿಸಿದ್ದರು ಎಂದು ವಿವರಿಸಲು ಕೇಳಿದ್ದಾರೆ.
ಆದರೆ ಈ ಸಂಬಂಧ ಪ್ರಧಾನಿ ಕಛೇರಿಯಿಂದ ತೃಪ್ತಿಕರ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಚತುರ್ವೇದಿ ಆರ್ಟಿಐ ವಿಷಯಗಳಲ್ಲಿ ಅತ್ಯುನ್ನತ ಮೇಲ್ಮನವಿ ಪ್ರಾಧಿಕಾರವಾದ ಸಿಐಸಿಗೆ ಈ ಸಂಬಂಧ ಅರ್ಜಿ ಸಲ್ಲಿಸಿದ್ದಾರೆ.ಬೋಸ್ ಮರಣ ಸಂಬಂಧ ಅವರು ಇದುವರೆಗೆ ಯಾವ ಅಧಿಕೃತ ಮಾಹಿತಿ ಸ್ವೀಕರಿಸಿಲ್ಲ ಎಂದು ಅವರು ಅರ್ಜಿಯಲ್ಲಿ ತಿಳಿಸಿದ್ದಾರೆ.
ಆದರೆ ಪ್ರಧಾನಿ ಕಛೇರಿಯು ಆರ್ಟಿಐ ಅರ್ಜಿಯ ವಿಚಾರವು ಸಂಸ್ಕೃತಿ ಸಚಿವಾಲಯಕ್ಕೆ ಸಂಬಂಧಿಸಿರುವುದರಿಂದ ಅರ್ಜಿಯನ್ನು ಆ ಸಚಿವಾಲಯಕ್ಕೆ ವರ್ಗಾಯಿಸಿರುವುದಾಗಿ ಹೇಳಿದೆ. ಅಲ್ಲದೆ , ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಬಹಿರಂಗಪಡಿಸಲಾಗಿದೆ, ಅವುಗಳ ಶಾಶ್ವತ ಪ್ರಯೋಜನಕ್ಕಾಗಿ ಅವುಗಳನ್ನು ರಾಷ್ಟ್ರೀಯ ಪತ್ರಾಗಾರಕ್ಕೆ ಕಳಿಸಲಾಗಿದೆ ಎಂದು ಪಿಎಂಒ ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿ ಹೇಳಿದರೆಂದು ಮುಖ್ಯ ಮಾಹಿತಿ ಆಯುಕ್ತ ಆರ್ ಕೆ ಮಾಥುರ್ ಹೇಳಿದ್ದಾರೆ.
ಈ ಅರ್ಜಿ ಸಲ್ಲಿಕೆಯಾಗಿ 15 ದಿನಗಳಲ್ಲಿ ಅರ್ಜಿದಾರರಿಗೆ "ನ್ಯಾಯಯುತ" ಉತ್ತರ ನೀಡಬೇಕು ಎಂದು ರಾಷ್ಟ್ರೀಯ ಪತ್ರಾಗಾರಕ್ಕೆ ವರದಿ ಮಾಡಲಾಗಿದೆ ಎಂದು ಮಾಥುರ್ ಹೇಳಿದರು.
1942 ರಲ್ಲಿ ಬ್ರಿಟಿಷ್ ವಿರುದ್ಧ ಹೋರಾಟ ನಡೆಸಲು ಜಪಾನಿ ಪಡೆಗಳ ಬೆಂಬಲದೊಂದಿಗೆ ಬೋಸ್ ಆಜಾದ್ ಹಿಂದ್ ಫೌಜ್ ಎಂದು ಕರೆಯಲ್ಪಡುವ ಭಾರತ ರಾಷ್ಟ್ರೀಯ ಸೇನೆಯನ್ನು ಕಟ್ಟಿದ್ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos