ತಿರುವನಂತಪುರ: ಶಬರಿಮಲೆಯಲ್ಲಿ ಪೊಲೀಸರು ಅಹಿತಕರ ವಾತಾವರಣ ಸೃಷ್ಟಿ ಮಾಡುವುದಿಲ್ಲ. ಭಕ್ತಾದಿಗಳೊಂದಿಗೆ ಘರ್ಷಣೆಯುಂಟಾಗುವುದು ನಮಗಿಷ್ಟವಿಲ್ಲ. ನಾವು ಕಾನೂನಷ್ಟೇ ಪಾಲನೆ ಮಾಡುತ್ತಿದ್ದೇವೆಂದು ಕೇರಳ ಪೊಲೀಸರು ಶುಕ್ರವಾರ ಹೇಳಿದ್ದಾರೆ.
ಶಬರಿಮಲೆಯಲ್ಲಿ ಹಿಂಸಾಚಾರ ಹೆಚ್ಚಾಗಿರುವ ಹಿನ್ನಲೆಯಲ್ಲಿ ಭಕ್ತಾದಿಗಳೊಂದಿಗೆ ಮಾತುಕತೆ ನಡೆಸಿರುವ ಕೇರಳ ಐಜಿ ಎಸ್.ಶ್ರೀಜಿತ್ ಅವರು, ಶಬರಿಮಲೆಯಲ್ಲಿ ಪೊಲೀಸರು ಅಹಿತಕರ ವಾತಾವರಣ ಸೃಷ್ಟಿ ಮಾಡುವುದಿಲ್ಲ. ಭಕ್ತಾದಿಗಳೊಂದಿಗೆ ಘರ್ಷಣೆಯುಂಟಾಗುವುದು ನಮಗಿಷ್ಟವಿಲ್ಲ. ನಾವು ಕಾನೂನಷ್ಟೇ ಪಾಲನೆ ಮಾಡುತ್ತಿದ್ದೇವೆ. ಮಹಿಳೆಯರ ಪ್ರವೇಶ ಕುರಿತು ಉನ್ನತಾಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ. ಸ್ಥಳದ ಪರಿಸ್ಥಿತಿ ಕುರಿತಂತೆ ಅವರಿಗೆ ವಿವರಣೆ ನೀಡುತ್ತಿದ್ದೇವೆಂದು ಹೇಳಿದ್ದಾರೆ.
ಈ ನಡುವೆ ತೀವ್ರ ಪ್ರತಿಭಟನೆಗಳ ನಡುವೆಯೂ ಇಂದು ಓರ್ವ ಪತ್ರಕರ್ತೆ ಹಾಗೂ ಮತ್ತೋರ್ವ ಮಹಿಳೆ ಭಾರೀ ಭದ್ರತೆಯೊಂದಿಗೆ ಅಯ್ಯಪ್ಪನ ಸನ್ನಿಧಿಯತ್ತ ಹೆಜ್ಜೆ ಹಾಕುತ್ತಿದ್ದಾರೆ.
ಬುಲೆಟ್ ಫ್ರೂಫ್ ಚಾಕೆಟ್ ಹಾಗೂ ಹೆಲ್ಮೆಟ್ ಧರಿಸಿರುವ ಮಹಿಳೆಯರು ಪೊಲೀಸರ ಸರ್ಪಗಾವಲೊಂದಿಗೆ ಅಯ್ಯಪ್ಪನ ದರ್ಶನಕ್ಕೆ ತೆರಳುತ್ತಿದ್ದಾರೆ.
ದೇಶದ ಸರ್ವೋನ್ನತ ನ್ಯಾಯಾಲಯವು 10ರಿಂದ 50 ವರ್ಷ ವಯಸ್ಸಿನ ಮಹಿಳೆಯರಿಗೆ ಪ್ರವೇಶಕ್ಕೆ ಅವಕಾಶ ನೀಡಿತ್ತು. ಇದರಂತೆ ಸುಪ್ರೀಂಕೋರ್ಟ್ ಆದೇಶದ ಬಳಿಕ ಬುಧವಾರವಷ್ಟೇ ದೇಗುಲದ ಬಾಗಿಲನ್ನು ತೆರೆಯಲಾಗಿತ್ತು. ಆದರೆ, ದೇವಾಲಯಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗಳಲ್ಲಿ ಕಂಡು ಕೇಳರಿಯದ ರೀತಿಯಲ್ಲಿ ಹಿಂಸಾಚಾರ ಭುಗಿಲೆದ್ದಿದೆ.