ತಿರುವನಂತಪುರಂ: ಶಬರಿಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶವನ್ನು ವಿರೋಧಿಸಿ ನಡೆದಿದ್ದ ಪ್ರತಿಭಟನೆ ದೇವಾಲಯದ ಹುಂಡಿಗೆ ಬರುತ್ತಿದ್ದ ಆದಾಯದ ಮೇಲೆ ಪರಿಣಾಮ ಬೀರಿದೆ.
ದೇವಾಲಯದ ಹುಂಡಿಯಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಶಬರಿಮಲೆಯನ್ನು ರಕ್ಷಿಸಿ, ಸ್ವಾಮಿಯೇ ಶರಣಂ ಅಯ್ಯಪ್ಪ ಎಂಬ ಸಂದೇಶಗಳನ್ನು ಹೊಂದಿದ್ದ ಚೀಟಿಗಳನ್ನು ಹಾಕಿದ್ದರು. ಪರಿಣಾಮವಾಗಿ ದೇವಾಲಯಕ್ಕೆ ಹುಂಡಿಯಿಂದ ಬರುತ್ತಿದ್ದ ಆದಾಯ 45 ಲಕ್ಷ ರೂಪಾಯಿಯಷ್ಟು ಕುಸಿದಿದೆ. ಸುಪ್ರೀಂ ಕೋರ್ಟ್ ಆದೇಶದ ನಂತರ ಸರ್ಕಾರದ ಅಧೀನದಲ್ಲಿರುವ ಎಲ್ಲಾ ದೇವಾಲಯಗಳಲ್ಲಿಯೂ ಯಾವ ಹಿಂದೂವೂ ಹುಂಡಿಗಳಿಗೆ ಹಣ ಹಾಕಬಾರದೆಂಬ ಚಳುವಳಿಯನ್ನು ಪ್ರಾರಂಭಿಸಲಾಗಿತ್ತು.
2017 ಕ್ಕೆ ಹೋಲಿಸಿದಾಗ ದೇವಾಲಯದ ಮೊದಲೆರಡು ದಿನಗಳ ಆದಾಯದಲ್ಲಿ ಈ ವರ್ಷ 44.5 ಲಕ್ಷ ರೂಪಾಯಿಯಷ್ಟು ಕಡಿಮೆಯಾಗಿದ್ದು ಕಳೆದ ವರ್ಷ ಮೊದಲ ದಿನವೇ 8.42 ಲಕ್ಷ ರೂಪಾಯಿ ಹುಂಡಿಯಲ್ಲಿ ಸಂಗ್ರಹವಾಗಿತ್ತು, ಆದರೆ ಈ ವರ್ಷ 4.83 ಲಕ್ಷ ರೂಪಾಯಿಯಷ್ಟಾಗಿದೆ.