ಮುಂಬೈ: ಭೀಮಾ ಕೋರೆಗಾಂವ್ ಮತ್ತು ವಿಚಾರವಾದಿಗಳ ಬಂಧನ ವಿಚಾರಕ್ಕೆ ಸಂಬಂಧಿಸಿದಂತೆ ಭುಗಿಲೆದ್ದಿದ್ದ ವಿವಾದಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಪೊಲೀಸ್ ಉಪ ನಿರ್ದೇಶಕರ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಭೀಮಾ ಕೋರೆಗಾಂವ್ ಹಿಂಸಾಚಾರ ಮತ್ತು ವಿಚಾರವಾದಿಗಳ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಪೊಲೀಸ್ ಉಪ ನಿರ್ದೇಶಕ ಪರಮ್ ಬೀರ್ ಸಿಂಗ್ ಅವರು ಪೊಲೀಸರ ಕ್ರಮವನ್ನು ಸಮರ್ಥಿಸಿಕೊಂಡು ಸಾಕ್ಷ್ಯಾಧಾರಗಳನ್ನು ಬಿಡುಗಡೆ ಮಾಡಿದ್ದರು. ಇದೀಗ ಇದು ನ್ಯಾಯಾಂಗ ನಿಂದನೆಯಾಗುತ್ತದೆ ಎಂದು ಆರೋಪಿಸಿ ಬಾಂಬೇ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಾಗಿದೆ.
ಸಾಮಾಜಿಕ ಕಾರ್ಯಕರ್ತ ಸಂಜಯ್ ಭಲೆರೋ ಎಂಬುವವರು ಈ ಬಗ್ಗೆ ಬಾಂಬೇ ಹೈಕೋರ್ಟ್ ನಲ್ಲಿ ಪಿಐಎಲ್ ದಾಖಲಿಸಿದ್ದು, ಈ ಬಗ್ಗೆ ಮಾತನಾಡಿರುವ ಅವರು, ನಾನು ಪೊಲೀಸ್ ವರಿಷ್ಠಾಧಿಕಾರಿಗಳು ಮಾಧ್ಯಮಗಳಿಗೆ ಬಹಿರಂಗ ಪಡಿಸಿದ ಸಾಕ್ಷ್ಯಾಧಾರದ ಪತ್ರವನ್ನು ಓದಿದ್ದೇನೆ. ಅದು ನಿಜಕ್ಕೂ ಪ್ರಮುಖ ಸಾಕ್ಷ್ಯವಾಗಿತ್ತು. ಈ ಹಿಂದೆ ಕೋರ್ಟ್ ಕೂಡ ಪ್ರಕರಣ ಸಂಬಂಧ ಯಾವುದೇ ರೀತಿಯ ಸಾಕ್ಷ್ಯಾಧಾರಗಳನ್ನು ಬಹಿರಂಗ ಮಾಡಬಾರದು ಎಂದು ಆದೇಶಿಸಿತ್ತು. ಹೀಗಿದ್ದೂ ಪರಮ್ ಬೀರ್ ಸಿಂಗ್ ಅವರು ಸಾಕ್ಷ್ಯವನ್ನು ಬಿಡುಗಡೆ ಮಾಡುವ ಮೂಲಕ ನ್ಯಾಯಾಂಗ ನಿಂದನೆ ಎಸಗಿದ್ದಾರೆ ಎಂದು ಹೇಳಿದ್ದಾರೆ.
ಇನ್ನು ಸಂಜಯ್ ಭಲೆರೋ ಅವರ ಪರ ವಕೀಲ ನಿತಿನ್ ಸತ್ಪುಟೆ ಅವರು ಕೋರ್ಟ್ ನಲ್ಲಿ ವಾದ ಮಂಡಿಸಲಿದ್ದಾರೆ. ಅಂತೆಯೇ ಅರ್ಜಿ ಸ್ವೀಕರಿಸಿರುವ ಬಾಂಬೆ ಹೈ ಕೋರ್ಟ್ ವಿಚಾರಣೆಯನ್ನು ಸೆಪ್ಟೆಂಬರ್ 7ರಂದು ನಡೆಸಲಿದೆ. ಅಂತೆಯೇ ಭೀಮಾ ಕೋರೆಗಾಂವ್ ಹಿಂಸಾಚಾರದ ಸಂತ್ರಸ್ಥರಾದ ಸತೀಶ್ ಗಾಯಕ್ವಾಡ್ ಅವರು ಪ್ರಕರಣದ ತನಿಖೆಯನ್ನು ಎನ್ ಐಎಗೆ ವಹಿಸುವಂತೆ ಮನವಿ ಮಾಡಿ ಸಲ್ಲಿಕೆ ಮಾಡಿರುವ ಅರ್ಜಿಯ ವಿಚಾರಣೆ ಕೂಡ ಅಂದೇ ಆರಂಭವಾಗಲಿದೆ. ಗಾಯಕ್ವಾಡ್ ಅವರಿಗೂ ನಿತಿನ್ ಸತ್ಪುಟೆ ಅವರು ವಕಾಲತ್ತು ವಹಿಸಲಿದ್ದಾರೆ.