ನವದೆಹಲಿ: ಸಲಿಂಗಕಾಮ ಅಪರಾಧವಲ್ಲ ಎಂಬ ಮಹತ್ವದ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್ ಅಂಗಳದಲ್ಲಿ ಇಂತಹುದೇ ಇನ್ನೂ 5 ಪ್ರಕರಣಗಳ ತೀರ್ಪು ಬಾಕಿ ಉಳಿದಿದೆ.
ಇತ್ತೀಚಿನ ದಿನಗಳಲ್ಲಿ ಸುಪ್ರೀಂ ಕೋರ್ಟ್ ಹಲವು ಮಹತ್ವದ ತೀರ್ಪುಗಳನ್ನು ನೀಡಿದೆ. ಖಾಸಗಿತನದ ಹಕ್ಕು ಮತ್ತು ತ್ರಿವಳಿ ತಲಾಖ್ ರದ್ದತಿಯಂತಹ ಕೆಲವು ತೀರ್ಪುಗಳನ್ನು ಸುಪ್ರೀಂ ಕೋರ್ಟ್ ನೀಡಿದ್ದು, ಸುಪ್ರೀಂ ಕೋರ್ಟ್ ಅಂಗಳದಲ್ಲಿ ಇಂತಹ ಇನ್ನೂ 5 ಪ್ರಮುಖ ಪ್ರಕರಣಗಳ ತೀರ್ಪು ಬಾಕಿ ಉಳಿದಿದೆ. ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ಅವಧಿ ಪೂರ್ಣಗೊಳ್ಳುವ ಮೊದಲು ಇನ್ನೂ ಹಲವು ಮಹತ್ವದ ತೀರ್ಪುಗಳು ಪ್ರಕಟವಾಗುವ ನಿರೀಕ್ಷೆ ಇದೆ. ಅಕ್ಟೋಬರ್ 2ರಂದು ಮಿಶ್ರಾ ನಿವೃತ್ತರಾಗಲಿದ್ದಾರೆ. ಅದಕ್ಕೂ ಮುನ್ನವೇ ಈ ಪ್ರಕರಣಗಳ ವಿಚಾರಣೆ ನಡೆಯಲಿದೆ.
ಬಾಕಿ ಉಳಿದಿರುವ ಐದು ಮಹಾ ಪ್ರಕರಣಗಳು
ವಿಶಿಷ್ಟ ಗುರುತು ಸಂಖ್ಯೆ ಯೋಜನೆ (ಆಧಾರ್) ಪ್ರಶ್ನಿಸಿ ಸಲ್ಲಿಕೆಯಾಗಿರುವ 27 ಅರ್ಜಿಗಳ ವಿಚಾರಣೆ ಮುಗಿದಿದ್ದು, ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠ ವಿಚಾರಣೆ ಪೂರ್ಣಗೊಳಿಸಿದೆ. ಅಂತೆಯೇ ತೀರ್ಪು ಕಾಯ್ದಿರಿಸಲಾಗಿದೆ. ಖಾಸಗಿತನವನ್ನು ಎತ್ತಿ ಹಿಡಿದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದರಿಂದಾಗಿ ಆಧಾರ್ ತೀರ್ಪಿನ ಬಗ್ಗೆಯೂ ಕುತೂಹಲ ಮೂಡಿದೆ.
ಅಯೋಧ್ಯೆಯ ವಿವಾದಿತ ನಿವೇಶನವನ್ನು ಮೂರಾಗಿ ವಿಭಜಿಸಿ ನಿರ್ಮೋಹಿ ಅಖಾಡ, ರಾಮ ಲಲ್ಲಾ ಮತ್ತು ಸುನ್ನಿ ವಕ್ಫ್ ಮಂಡಳಿಗೆ ಹಂಚಿಕೆ ಮಾಡಿ ಅಲಹಾಬಾದ್ ಹೈಕೋರ್ಟ್ ನೀಡಿದ್ದ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲಾಗಿದೆ. ಮಸೀದಿಯು ಇಸ್ಲಾಂಗೆ ಅಂತರ್ಗತ ವಿಚಾರವೇ ಎಂಬ ಪ್ರಶ್ನೆಗೆ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠವು ಉತ್ತರ ಕಂಡುಕೊಳ್ಳಲಿದೆ. ಇದರ ಆಧಾರದಲ್ಲಿಯೇ ಅಯೋಧ್ಯೆಯ ವಿವಾದಾತ್ಮಕ ನಿವೇಶನ ಪ್ರಕರಣ ಇತ್ಯರ್ಥವಾಗಲಿದೆ.
ಶಬರಿಮಲೆಗೆ ಮಹಿಳೆಯರಿಗೆ ಪ್ರವೇಶ ಅವಕಾಶಕ್ಕೆ ಸಂಬಂಧಿಸಿದ ಅರ್ಜಿಯ ವಿಚಾರಣೆ ಕೂಡ ಪೂರ್ಣಗೊಂಡಿದ್ದು, ಸಮಾಜದ ಪುರುಷ ಪ್ರಧಾನ ಗ್ರಹಿಕೆಯೇ ಮಹಿಳೆಯರಿಗೆ ಪ್ರವೇಶ ನಿಷೇಧಕ್ಕೆ ಕಾರಣ ಎಂದು ವಿಚಾರಣೆ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಹೇಳಿತ್ತು. ಹೀಗಾಗಿ ಈ ಪ್ರಕರಣದ ತೀರ್ಪು ಕೂಡ ಕುತೂಹಲ ಕೆರಳಿಸಿದೆ.
ಜನಪ್ರತಿನಿಧಿಗಳ ವಕೀಲ ವೃತ್ತಿಯ ಪ್ರಶ್ನೆ
ಸಂಸದ ಅಥವಾ ಶಾಸಕರಾಗಿ ಆಯ್ಕೆಯಾಗುವ ವಕೀಲರು ತಮ್ಮ ವೃತ್ತಿ ಮುಂದುವರಿಸ ಬಹುದೇ ಎಂಬ ಅರ್ಜಿಯ ವಿಚಾರಣೆಯೂ ಪೂರ್ಣಗೊಂಡಿದೆ. ಸಂಸದ ಅಥವಾ ಶಾಸಕ ಜನಪ್ರತಿನಿಧಿಯೇ ಹೊರತು ಸರ್ಕಾರದ ಪೂರ್ಣಾವಧಿ ನೌಕರ ಅಲ್ಲ ಎಂದು ವಿಚಾರಣೆ ಸಂದರ್ಭದಲ್ಲಿ ಸರ್ಕಾರ ಹೇಳಿತ್ತು. ಹೀಗಾಗಿ ಈ ಪ್ರಕರಣದ ತೀರ್ಪು ಕೂಡ ಕುತೂಹಲ ಕೆರಳಿಸಿದೆ.
ವ್ಯಭಿಚಾರಕ್ಕೆ ಶಿಕ್ಷೆಯಲ್ಲಿ ಲಿಂಗ ತಾರತಮ್ಯ
ಇನ್ನು ವ್ಯಭಿಚಾರಕ್ಕೆ ಸಂಬಂಧಿಸಿದಂತೆ ಭಾರತೀಯ ದಂಡ ಸಂಹಿತೆಯಲ್ಲಿ ಇರುವ ಕೆಲವು ಅಂಶಗಳನ್ನು ಸಿಜೆಐ ದೀಪಕ್ ಮಿಶ್ರಾ ನೇತೃತ್ವದ ಸಂವಿಧಾನ ಪೀಠವು ಪರಿಶೀಲನೆಗೆ ಒಳಪಡಿಸಿದೆ. ಸಂಹಿತೆಯಲ್ಲಿರುವ ಕೆಲವು ಅಂಶಗಳು ಮಹಿಳಾ ವಿರೋಧಿ ಎಂದು ಪೀಠ ಅಭಿಪ್ರಾಯಪಟ್ಟಿದೆ.
ಅಂತೆಯೇ ಈ ಎಲ್ಲ ಪ್ರಕರಣಗಳ ಮುಂದಿನ 20 ದಿನಗಳಲ್ಲಿ ಇವು ಸೇರಿ ಹಲವು ಮಹತ್ವದ ಪ್ರಕರಣಗಳ ತೀರ್ಪು ಬರುವ ನಿರೀಕ್ಷೆ ಇದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos