ದೇಶ

ಬಿಹಾರ: ರೈಲ್ವೆ ಸಿಬ್ಬಂದಿಯಿಂದ ಹಣ ಲೂಟಿ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯ ಹತ್ಯೆ

Lingaraj Badiger
ಪಾಟ್ನ: ಬಿಹಾರದ ರೋಹಟಕ್ ಜಿಲ್ಲೆಯಲ್ಲಿ ರೈಲ್ವೆ ಸಿಬ್ಬಂದಿಯಿಂದ ಸುಮಾರು 24 ಲಕ್ಷ ರುಪಾಯಿ ಲೂಟಿ ಮಾಡಲು ಯತ್ನಿಸುತ್ತಿದ್ದ ಮೂವರ ಪೈಕಿ ಓರ್ವನನ್ನು ಹೊಡೆದು ಕೊಂದ ಘಟನೆ ಮಂಗಳವಾರ ನಡೆದಿದೆ.
ಸಸಾರಾಮ್ ರೈಲ್ವೆ ನಿಲ್ದಾಣದ ರೇಲ್ವೆ ಸಿಬ್ಬಂದಿ ಮೇಲೆ ಮೂವರು ದರೋಡೆಕೋರರು ಹಲ್ಲೆ ನಡೆಸಿದ್ದಲ್ಲದೆ ಜನರನ್ನು ಹೆದುರಿಸಲು ಗುಂಡು ಹಾರಿಸಿದ್ದು, ಓರ್ವ ಮಹಿಳೆ ಗಾಯಗೊಂಡಿದ್ದಾರೆ ಎಂದು ನಗರ ಪೊಲೀಸ್ ಠಾಣೆಯ ಅಧಿಕಾರಿ ಆರ್ ಬಿ ಪಾಸ್ವಾನ್ ಅವರು ತಿಳಿಸಿದ್ದಾರೆ.
ಬುಕ್ಕಿಂಗ್ ಸಹಾಯಕ ಅಶೋಕ್ ಕುಮಾರ್ ಮತ್ತು ಬುಕ್ಕಿಂಗ್ ಮೇಲ್ವಿಚಾರಕ ಶೈಲೇಶ್ ಕುಮಾರ್ ಅವರು 24.78 ಲಕ್ಷ ರುಪಾಯಿ ಬ್ಯಾಂಕಿಗೆ ಜಮೆ ಮಾಡಲು ಹೋಗುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಅವರು ಹೇಳಿದ್ದಾರೆ.
ಬೈಕ್ ನಲ್ಲಿ ಬಂದ ಮೂವರು ಯುವಕರು ರೇಲ್ವೆ ಸಿಬ್ಬಂದಿ ಬಳಿ ಇದ್ದ ಹಣದ ಬ್ಯಾಗ್ ಕಿತ್ತಿಕೊಳ್ಳಲು ಯತ್ನಿಸಿದ್ದಾರೆ. ಬ್ಯಾಗ್ ನೀಡಲು ನಿರಾಕರಿಸಿದ ಅಶೋಕ್ ಕುಮಾರ್ ಮೇಲೆ ಹಲ್ಲೆ ನಡೆಸಿದ್ದಾರೆ. ಇದನ್ನು ಗಮನಿಸಿದ ಸಾರ್ವಜನಿಕರು ದರೋಡೆಕೋರರನ್ನು ಹಿಡಿದು ಥಳಿಸಿದ್ದಾರೆ. ಇಬ್ಬರು ತಪ್ಪಿಸಿಕೊಂಡಿದ್ದು, ಗಂಭೀರವಾಗಿ ಗಾಯಗೊಂಡಿದ್ದ 20 ವರ್ಷದ ಮತ್ತೊಬ್ಬ ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಯುವಕ ಮೃತಪಟ್ಟಿದ್ದಾರೆ ಎಂದು ಪಾಸ್ವಾನ್ ತಿಳಿಸಿದ್ದಾರೆ. 
ಕಳೆದ ಒಂದು ವಾರದಲ್ಲಿ ನಡೆಯುತ್ತಿರುವ ಮೂರನೇ ಗುಂಪು ಹತ್ಯೆ ಇದಾಗಿದ್ದು, ತಪ್ಪಿಸಿಕೊಂಡ ಇತರೆ ಇಬ್ಬರು ಆರೋಪಿಗಳಿಗಾಗಿ ಶೋಧ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
SCROLL FOR NEXT