ನವದೆಹಲಿ: ಹೆಚ್ಚುತ್ತಿರುವ ಬ್ಯಾಡ್ ಲೋನ್ ಗಳ ಬಗ್ಗೆ ಸಂಸತ್ ಸಮಿತಿಯ ಪ್ರಶ್ನೆಗಳಿಗೆ ಆರ್ ಬಿಐ ನ ಮಾಜಿ ಗೌರ್ನರ್ ರಘುರಾಮ್ ರಾಜನ್ ಅವರು ನೀಡಿದ್ದ ವಿಸ್ತೃತ ವಿವರಣೆ ಈಗ ರಾಜಕೀಯ ವಲಯದಲ್ಲಿ ವಿವಾದವನ್ನೆಬ್ಬಿಸಿದೆ.
ಹೈಪ್ರೊಫೈಲ್ ಸುಸ್ತಿದಾರರ ಬಗ್ಗೆ ರಘುರಾಮ್ ರಾಜನ್ ನೀಡಿದ್ದ ಪಟ್ಟಿಯನ್ನು ಪ್ರಧಾನಿ ನರೇಂದ್ರ ಮೋದಿ ಕಚೇರಿ ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಿತ್ತು ಎಂಬ ಅರ್ಥದಲ್ಲಿ ರಘುರಾಮ್ ರಾಜನ್ ಹೇಳಿಕೆ ನೀಡಿದ್ದಾರೆ. ಬ್ಯಾಂಕ್ ವಂಚನೆಗಳಿಗೆ ಸಂಬಂಧಿಸಿದಂತೆ ವಂಚನೆ ಮೇಲ್ವಿಚಾರಣಾ ಸೆಲ್ ನ್ನು ಆರ್ ಬಿಐ ಪ್ರಾರಂಭಿಸಿತ್ತು. ಅಷ್ಟೇ ಅಲ್ಲದೇ ಹೈ-ಪ್ರೊಫೈಲ್ ಸುಸ್ತಿದಾರರ ಪಟ್ಟಿಯನ್ನೂ ನಾನು ಪ್ರಧಾನಿ ಕಚೇರಿಗೆ ಕಳಿಸಿಕೊಟ್ಟು ತಕ್ಷಣವೇ ಕ್ರಮ ಕೈಗೊಳ್ಳುವುದಕ್ಕೆ ಮನವಿ ಮಾಡಿದ್ದೆ ಎಂದು ರಘುರಾಮ್ ರಾಜನ್ ಹೇಳಿದ್ದಾರೆ.
ರಘುರಾಮ್ ರಾಜನ್ ವಿಸ್ತೃತ ವಿವರಣೆ ನೀಡಿರುವ ಹಿನ್ನೆಲೆಯಲ್ಲಿ ಮುರಳಿ ಮನೋಹರ್ ಜೋಷಿ ನೇತೃತ್ವದ ಸಂಸದೀಯ ಸಮಿತಿ ಈಗ ಪ್ರಧಾನಿಗಳ ಪ್ರಧಾನ ಕಾರ್ಯದರ್ಶಿ ನೃಪೇಂದ್ರ ಮಿಶ್ರ, ಹಣಕಾಸು ಕಾರ್ಯದರ್ಶಿ ಹಸ್ಮುಖ್ ಅಧಿಯಾ ಅವರನ್ನು ಪ್ರಶ್ನೆ ಮಾಡಲಿದ್ದು ರಾಜನ್ ಸಲ್ಲಿಸಿದ್ದ ವಂಚಕರ ಪಟ್ಟಿಯ ಕುರಿತು ಯಾವ ಕ್ರಮ ಕೈಗೊಳ್ಳಲಾಗಿತ್ತು ಎಂಬ ಬಗ್ಗೆ ಪ್ರಶ್ನಿಸಲಿದೆ.