ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಅನುಮತಿಯಿಲ್ಲದೆಯೇ ಸಿಬಿಐ ಸಾಲದ ದೊರೆ ವಿಜಯ್ ಮಲ್ಯ ಅವರಿಗೆ ನೀಡಲಾಗಿದ್ದ ಲುಕ್ಔಟ್ ನೋಟಿಸ್ ಬದಲಾಯಿಸಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಶುಕ್ರವಾರ ಹೇಳಿದ್ದಾರೆ.
ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ಸಿಬಿಐ ನೀಡಿದ್ದ ಬಂಧನ ನೋಟಿಸ್ ಮಲ್ಯ ಅವರಿಗೆ ಒಂದು ರೀತಿ ಮಾಹಿತಿ ನೀಡಿದ ನೋಟಿಸ್ ಆಗಿ ಬದಲಾಗಿತ್ತು. ಇದು ಅವರು ದೇಶ ಬಿಟ್ಟು ಓಡಿಹೋಗಲು ಸಹಾಯ ಮಾಡಿತು. ಸಿಬಿಐ ನೇರವಾಗಿ ಪ್ರಧಾನಮಂತ್ರಿಗಳಿಗೆ ವರದಿ ಸಲ್ಲಿಸಿದೆ. ಇದನ್ನು ಒಪ್ಪಲು ಸಾಧ್ಯವಿಲ್ಲ. ಇದೊಂದು ಹೈ ಪ್ರೊಫೈಲ್ ಹಾಗೂ ವಿವಾದಾತ್ಮಕ ಪ್ರಕರಣವಾಗಿದ್ದು, ಪ್ರಧಾನಮಂತ್ರಿಗಳ ಒಪ್ಪಿಗೆ ಇಲ್ಲದೆಯೇ ಸಿಬಿಐ ಲುಕ್ಔಟ್ ನೋಟಿಸ್ ಬದಲಾಯಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಈ ಹಿಂದೆ ಹೇಳಿಕೆ ನೀಡಿದ್ದ ಸಿಬಿಐ, ಮದ್ಯದ ದೊರೆ ವಿಜಯ್ ಮಲ್ಯ ವಿರುದ್ಧ 2015ರಲ್ಲಿ ಹೊರಡಿಸಲಾಗಿದ್ದ ಲುಕ್ ಔಟ್ ಸರ್ಕ್ಯುಲರ್ ನಲ್ಲಿನ ಬದಲಾವಣೆ ತೀರ್ಪಿನಲ್ಲಿ ಆದ ತಪ್ಪು. ಮೂರು ವರ್ಷಗಳ ನಂತರ ವಿವಾದ ಮತ್ತೆ ಗರಿಗೆದರಿದಾಗ 2015ರ ಅಕ್ಟೋಬರ್ 12ರಂದು ಮೊದಲ ಲುಕ್ ಔಟ್ ಸರ್ಕ್ಯುಲರ್ ಹೊರಡಿಸಿದಾಗ ವಿಜಯ್ ಮಲ್ಯ ಅದಾಗಲೇ ವಿದೇಶದಲ್ಲಿದ್ದರು. ನಂತರ ವಲಸೆ ವಿಭಾಗದಲ್ಲಿ ಸಿಬಿಐ ವಿಜಯ್ ಮಲ್ಯರನ್ನು ಭಾರತಕ್ಕೆ ಕರೆತರುವ ಬಗ್ಗೆ ಕೇಳಿತ್ತು. ಲುಕ್ ಔಟ್ ಸರ್ಕ್ಯುಲರ್ ಪ್ರಕಾರ ಮಲ್ಯರನ್ನು ಬಂಧಿಸುವ ಅಗತ್ಯವಿರಲಿಲ್ಲ. ಏಕೆಂದರೆ ಅವರು ಆಗ ರಾಜ್ಯಸಭಾ ಸದಸ್ಯರಾಗಿದ್ದರು ಮತ್ತು ಅವರ ವಿರುದ್ದ ವಾರಂಟ್ ಹೊರಡಿಸುವ ಅಗತ್ಯವಿರಲಿಲ್ಲ ಎಂದು ಹೇಳಿತ್ತು.