ರಾಯ್ ಪುರ: ತನ್ನ ಕಣ್ಣ ಮುಂದೆಯೇ ಸ್ನೇಹಿತೆ ಮೇಲೆ ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ಮಾಡಿದ್ದರಿಂದ ಮನನೊಂದು ವ್ಯಕ್ತಿಯೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಛತ್ತೀಸ್ ಘಡದ ಕೊರ್ಬಾದಲ್ಲಿ ನಡೆದಿದೆ.
ಅತ್ಯಾಚಾರದಿಂದ ತನ್ನ ಸ್ನೇಹಿತೆಯನ್ನು ರಕ್ಷಿಸಲಾಗಲಿಲ್ಲ ಎಂದು ಮನನೊಂದ ವ್ಯಕ್ತಿಯೋರ್ವ ಘಟನೆ ನಡೆದ ಮಾರನೇ ದಿನವೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಛತ್ತೀಸ್ ಗಢದ ಕೊರ್ಬಾ ಗ್ರಾಮದ ನಿವಾಸಿ ಸಾವನ್ ಸಾಯಿ ಯುವಕ ಆತ್ಮಹತ್ಯೆಗೆ ಶರಣಾದ ವ್ಯಕ್ತಿಯಾಗಿದ್ದು, ತನ್ನ ಅಪ್ರಾಪ್ತ ಸ್ನೇಹಿತೆ ಮೇಲೆ ನಡೆದ ಸಾಮೂಹಿಕ ಅತ್ಯಾಚಾರದಿಂದ ಅತ ನೊಂದು ಇಂತಹ ಕಠಿಣ ನಿರ್ಧಾರಕ್ಕೆ ಬಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಛತ್ತೀಸ್ ಘಡದ ಕೊರ್ಬಾ ನಿವಾಸಿ 21 ವರ್ಷದ ಸವನ್ ಸಾಯಿ ತನ್ನ ಸ್ನೇಹಿತೆಯೊಂದಿಗೆ ತೆರಳುತ್ತಿದ್ದಾಗ ಕೆಲ ದುಷ್ಕರ್ಮಿಗಳು ಇವರನ್ನು ಹಿಂಬಾಲಿಸಿದ್ದಾರೆ. ಈ ವೇಳೆ ಯಾರೂ ಇಲ್ಲದ ಸಂದರ್ಭ ನೋಡಿಕೊಂಡು ದುಷ್ಕರ್ಮಿಗಳು ಅವರನ್ನು ನಿರ್ಜನ ಪ್ರದೇಶಕ್ಕೆ ಎಳೆದೊಯ್ದಿದ್ದು, ಸಾವನ್ ಸಾಯಿಯನ್ನು ಕಟ್ಟಿ ಹಾಕಿದ್ದಾರೆ. ಬಳಿಕ ಆತನ ಕಣ್ಣೆದುರೇ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಗೈದಿದ್ದಾರೆ. ಬಳಿಕ ವಿಷಯ ಯಾರಿಗೂ ಹೇಳದಂತೆ ಹೇಳಿದರೆ ಕೊಂದು ಹಾಕುವುದಾಗಿ ಬೆದರಿಕೆ ಹಾಕಿ ಪರಾರಿಯಾಗಿದ್ದಾರೆ.
ಬಳಿಕ ಸ್ನೇಹಿತೆಯನ್ನು ಆಕೆಯ ಮನೆಗೆ ಬಿಟ್ಟ ಸಾವನ್ ಸಾಯಿ ತನ್ನ ಮನೆಗೆ ತೆರಳಿದ್ದಾನೆ. ಆದರೆ ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ ಬಳಿಕ ದುಷ್ಕರ್ಮಿಗಳಿಬ್ಬರು ಈ ವಿಚಾರವನ್ನು ಗ್ರಾಮದ ಕೆಲವು ಯುವಕರಲ್ಲಿ ಹೇಳಿಕೊಂಡಿದ್ದಾರೆ. ಇದರಿಂದ ತೀವ್ರ ಮನನೊಂದು ಯುವಕ ಸಾಯಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ. ಎರಡು ದಿನಗಳ ಹಿಂದೆ ಸಾವನ್ ಸಾಯಿಯ ಆತ್ಮಹತ್ಯೆಯ ತನಿಖೆ ವೇಳೆ ಈ ಸಾಮೂಹಿಕ ಅತ್ಯಾಚಾರ ವಿಚಾರ ಬಹಿರಂಗವಾಗಿದೆ. ಕೂಡಲೇ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪ್ರಕರಣ ಸಂಬಂಧ ಈಶ್ವರ್ ದಾಸ್(22) ಹಾಗೂ ಖೇಮ್ ಕನ್ವರ್(21) ಎಂಬ ಆರೋಪಿಗಳನ್ನು ಬಂಧಿಸಿದ್ದು, ಅತ್ಯಾಚಾರ ಮತ್ತು ಆತ್ಮಹತ್ಯೆಗೆ ಪ್ರಚೋದನೆ ಆರೋಪದಲ್ಲಿ ಕೇಸ್ ದಾಖಲಿಸಿದ್ದಾರೆ.