ಮಹೇಂದ್ರಗಢ: 2018ನೇ ಸಾಲಿನ ಸಿಬಿಎಸ್ ಇ ಪರೀಕ್ಷೆಯಲ್ಲಿ ಇಡೀ ದೇಶಕ್ಕೆ ಅಗ್ರ ಸ್ಥಾನ ಪಡೆದಿದ್ದ ಹರ್ಯಾಣ ಮೂಲದ ಯುವತಿಯನ್ನು ಅಪಹರಿಸಿದ ಕಾಮುಕರು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದು, ಪ್ರಕರಣ ಸಂಬಂಧ ಕೇಂದ್ರ ಸರ್ಕಾರದ ವಿರುದ್ಧ ಅತ್ಯಾಚಾರ ಸಂತ್ರಸ್ತ ವಿದ್ಯಾರ್ಥಿನಿ ತಾಯಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಕರಣ ಸಂಬಂಧ ನನ್ನ ಮಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನ್ಯಾಯ ದೊರಕಿಸಿ ಕೊಡಬೇಕು. ಮೋದಿಯವರು ಬೇಟಿ ಪಡಾವೋ ಬೇಟಿ ಬಚಾವೋ ಎಂದು ಹೇಳುತ್ತಾರೆ? ಆದರೆ, ಹೇಗೆ? ಎಂದು ಸಂತ್ರಸ್ತ ವಿದ್ಯಾರ್ಥಿನಿಯ ತಾಯಿ ಪ್ರಶ್ನಿಸಿದ್ದಾರೆ.
ದಯವಿಟ್ಟು ನನ್ನ ಮಗಳಿಗೆ ನ್ಯಾಯ ಕೊಡಿಸಲು ಸಹಾಯ ಮಾಡಿ. ಹರಿಯಾಣ ರಾಜ್ಯದಲ್ಲಿ ಟಾಪರ್ ಆಗಿದ್ದ ನನ್ನ ಮಗಳಿಗೆ ಗಣರಾಜ್ಯೋತ್ಸವ ದಿನದಂದು ಸನ್ಮಾನ ಮಾಡಲಾಗಿತ್ತು. ಇದೀಗ ನಾವು ಏನು ಮಾಡುವುದು? ಮೋದಿಯವರೇಕೆ ನಮ್ಮ ದನಿಯನ್ನು ಕೇಳಿಸಿಕೊಳ್ಳುತ್ತಿಲ್ಲ? ಪ್ರಧಾನಮಂತ್ರಿಗಳು ಎಲ್ಲಿದ್ದಾರೆ? ಆರೋಪಿಗಳು ಇಂದು ನನ್ನ ಮಗಳಿಗೆ ಬೆದರಿಕೆ ಹಾಕುತ್ತಿದ್ದಾರೆ. ಅತ್ಯಾಚಾರಿಗಳ ವಿರುದ್ಧ ಗ್ರಾಮಸ್ಥರು ಏನನ್ನೂ ಮಾತನಾಡುತ್ತಿಲ್ಲ. ಪೊಲೀಸರು ಕೂಡ ನಮ್ಮ ಮಾತನ್ನು ಕೇಳುತ್ತಿಲ್ಲ. ಆರೋಪಿಗಳು ಸ್ವತಂತ್ರವಾಗಿ ಓಡಾಡಿಕೊಂಡಿದ್ದಾರೆ. ಸರ್ಕಾರವಾಗಲೀ ಅಥವಾ ಪೊಲೀಸರಾಗಲೀ ನಮ್ಮ ಮಾತನ್ನು ಕೇಳುತ್ತಿಲ್ಲ. ಘಟನೆ ನಡೆದು 15-16 ಗಂಟೆಗಳಾಗಿವೆ. ಈವರೆಗೂ ಯಾವುದೇ ಕ್ರಮಗಳನ್ನೂ ಕೈಗೊಂಡಿಲ್ಲ ಎಂದು ತಿಳಿಸಿದ್ದಾರೆ.
ಸಿಬಿಎಸ್ಇ ಪರೀಕ್ಷೆಯಲ್ಲಿ ದೇಶಕ್ಕೇ ಟಾಪರ್ ಆಗಿ, ರಾಷ್ಟ್ರಪತಿಗಳಿಂದ ಸನ್ಮಾನ ಸ್ವೀಕರಿಸಿದ 19 ವರ್ಷದ ಕಾಲೇಜು ವಿದ್ಯಾರ್ಥಿನಿಯನ್ನು ಅಪಹರಿಸಿದ ದುಷ್ಕರ್ಮಿಗಳು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಗುರಗಾಂವ್ ನಿಂದ 116 ಕಿಲೋಮೀಟರ್ ದೂರದ ಬಸ್ ನಿಲ್ದಾಣವೊಂದರಲ್ಲಿ ಅರೆ ನಗ್ನ ಸ್ಥಿತಿಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಯುವತಿ ಪತ್ತೆಯಾಗಿದ್ದಳು. ಕೂಡಲೇ ಸ್ಥಳೀಯರು ಆಕೆಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲು ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ವೇಳೆ ಸಾಮೂಹಿಕ ಅತ್ಯಾಚಾರ ವಿಚಾರ ಬೆಳಕಿಗೆ ಬಂದಿತ್ತು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos