ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಉಗ್ರರು ಅಟ್ಟಹಾಸ ಮೆರೆದಿದ್ದು, ಕಳೆದ ರಾತ್ರಿ ತಾವು ಅಪಹರಣ ಮಾಡಿದ್ದ ಎಲ್ಲ ಪೊಲೀಸ್ ಸಿಬ್ಬಂದಿಗಳನ್ನುಹತ್ಯೆಗೈದಿದ್ದಾರೆ ಎಂದು ತಿಳಿದುಬಂದಿದೆ.
ಶುಕ್ರವಾರ ಮುಂಜಾನೆ ಉಗ್ರರು ಅಪಹರಿಸಿದ್ದ ನಾಲ್ವರು ಪೊಲೀಸರಲ್ಲಿ ಮೂವರನ್ನು ಹತ್ಯೆ ಮಾಡಲಾಗಿದೆ. ಗ್ರಾಮಸ್ಥರ ಸಹಾಯದಿಂದ ಒಬ್ಬರು ಪೊಲೀಸರು ಬದುಕುಳಿದಿದ್ದಾರೆ ಎಂದು ತಿಳಿದು ಬಂದಿದೆ. ಉಗ್ರರ ಹೀನ ಕೃತ್ಯಕ್ಕೆ ಸ್ಥಳೀಯ ಪೊಲೀಸ್ ಅಧಿಕಾರಿಗಳಾದ ಫಿರ್ದೋಸ್ ಅಹ್ಮದ್ ಕುಚೆ, ಕುಲ್ದೀಪ್ ಸಿಂಗ್ ಮತ್ತು ನಿಸಾರ್ ಅಹ್ಮದ್ ಧೋಬ್ ಹುತಾತ್ಮರಾದ ಪೊಲೀಸರಾಗಿದ್ದಾರೆ.
ಹಿಜ್ಬುಲ್ ಉಗ್ರರು ಈ ಕೃತ್ಯ ಎಸಗಿರಬಹುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಶುಕ್ರವಾರ ಮುಂಜಾನೆ ದಕ್ಷಿಣ ಕಾಶ್ಮೀರದ ಶೋಪಿಯಾನದಿಂದ ನಾಲ್ಕು ಮಂದಿ ಪೊಲೀಸರನ್ನು ಭಯೋತ್ಪಾದಕರು ಅಪಹರಿಸಿದ್ದರು. ಅಲ್ಲದೆ ಭಯೋತ್ಪಾದಕರು, ಪೊಲೀಸರಿಗೆ ವೃತ್ತಿಯಿಂದ ರಾಜೀನಾಮೆ ನೀಡುವಂತೆ ಎಚ್ಚರಿಕೆ ನೀಡಿದ್ದರು.
ಈ ಹಿಂದೆ ಪೊಲೀಸರ ಎಂಟು ಮಂದಿ ಕುಟುಂಬಸ್ಥರನ್ನು ಉಗ್ರರು ಅಪಹರಣ ಮಾಡಿದ್ದರು. ಈ ಘಟನೆ ಬೆಳಕಿಗೆ ಬಂದ ಕೇವಲ ಮೂರು ವಾರಗಳ ಬಳಿಕ ಇದೀಗ ನಾಲ್ವರು ಪೊಲೀಸರನ್ನು ಅಪಹರಣ ಮಾಡಲಾಗಿತ್ತು. ಇದರ ಬೆನ್ನಲ್ಲೇ ಇದೀಗ ಮೂವರು ಅಧಿಕಾರಿಗಳ ಮೃತ ದೇಹ ಪತ್ತೆಯಾಗಿದೆ. ಇನ್ನು ಹಾಲಿ ಪೊಲೀಸರ ಅಪಹರಣ ಪ್ರಕರಣ ಮಾಡಿದ್ದು ನಾವೇ ಎಂದು ಹಿಜ್ಬುಲ್ ಕಮಾಂಡರ್ ರಿಯಾಜ್ ನಾಯ್ಕೂ ಹೇಳಿದ್ದಾನೆ. ಈ ಬಗ್ಗೆ ವಿಡಿಯೋ ಅಪ್ಲೋಡ್ ಮಾಡಿರುವ ಉಗ್ರ ಸಂಘಟನೆ, ಸೇನೆಯಲ್ಲಿರುವ ಪೊಲೀಸ್ ಅಧಿಕಾರಿಗಳು ಕೂಡಲೇ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದು ಎಚ್ಚರಿಕೆ ನೀಡಿದ್ದಾನೆ.
ಜಮ್ಮು-ಕಾಶ್ಮೀರದಲ್ಲಿ ಉಗ್ರರ ದಮನಕ್ಕೆ ಸೇನೆ ಜತೆ ಪೊಲೀಸರು ಕೈಜೋಡಿಸಿರುವುದು ಭಯೋತ್ಪಾದಕರ ನಿದ್ದೆಗೆಡಿಸಿದೆ. ಹೀಗಾಗಿ ಉಗ್ರರು ಪೊಲೀಸರನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಅಲ್ಲದೆ ಮುಸ್ಲಿಂ ಸಮುದಾಯದ ಪೊಲೀಸರನ್ನು ಸೇವೆಯಿಂದ ರಾಜೀನಾಮೆ ಪಡೆಯುವಂತೆ ಉಗ್ರರು ಆಗ್ರಹಿಸಿದ್ದಾರೆ ಎಂದು ತಿಳಿದುಬಂದಿದೆ.