ಶ್ರೀನಗರ: ಕಾಶ್ಮೀರದಲ್ಲಿ ಸರ್ಕಾರಿ ಕೆಲಸ ಬಿಡುವಂತೆ ಬೆದರಿಕೆ ಹಾಕಿ ಪೊಲೀಸರ ಹತ್ಯೆಗೈದಿದ್ದ ಉಗ್ರರಿಗೆ ಭಾರತೀಯ ಸೇನೆ ಖಡಕ್ ತಿರುಗೇಟು ನೀಡಿದ್ದು, ಪೊಲೀಸರ ಹತ್ಯೆಗೈದ ಮಾರನೇ ದಿನವೇ ಐದು ಉಗ್ರರನ್ನು ಮಟ್ಟಹಾಕಿದೆ.
ಜಮ್ಮು-ಕಾಶ್ಮೀರದಲ್ಲಿ ಶುಕ್ರವಾರದಂದು ಉಗ್ರರು ಪೊಲೀಸರನ್ನು ಅಪಹರಿಸಿ ಬರ್ಬರವಾಗಿ ಹತ್ಯೆಗೈದಿದ್ದಕ್ಕೆ ಭಾರತೀಯ ಸೇನೆ ಪ್ರತೀಕಾರ ತೆಗೆದುಕೊಂಡಿದ್ದು, ಉತ್ತರ ಕಾಶ್ಮೀರದ ಬಂಡಿಪೋರಾ ಜಿಲ್ಲೆಯಲ್ಲಿ ಗಡಿ ದಾಟುವ ಸನ್ನಾಹದಲ್ಲಿದ್ದ ಐವರು ಲಷ್ಕರ್ ಉಗ್ರರನ್ನು ಸೇನೆ ಕೊಂದು ಹಾಕಿದೆ.
ಉಗ್ರರ ದಮನಕ್ಕೆ ಸೇನೆ ಜತೆ ಜಮ್ಮು-ಕಾಶ್ಮೀರ ಪೊಲೀಸರು ಕೈಜೋಡಿಸಿದ್ದು, ಉಗ್ರರ ನಿದ್ದೆಗೆಡಿಸಿದೆ. ಹೀಗಾಗಿ ಉಗ್ರರು ಕ್ರೂರ ಕೃತ್ಯಕ್ಕಿಳಿದಿದ್ದು, ಭಯೋತ್ಪಾದಕರು ಇತ್ತೀಚೆಗೆ ಪೊಲೀಸರ ಕುಟುಂಬಸ್ಥರನ್ನು ಅಪಹರಣ ಮಾಡಿದ್ದರು. ಅಲ್ಲದೆ ಪೊಲೀಸ್ ಸೇವೆಗೆ ರಾಜೀನಾಮೆ ಪಡೆಯುವಂತೆ ಎಚ್ಚರಿಕೆಯನ್ನೂ ನೀಡಿದ್ದರು. ಆದರೆ ಶುಕ್ರವಾರ ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಹಿಜ್ಬುಲ್ ಮುಜಾಹಿದೀನ್ ಉಗ್ರರು ನಾಲ್ವರು ಪೊಲೀಸರನ್ನು ಅಪಹರಣ ಮಾಡಿ ಈ ಪೈಕಿ ಮೂವರನ್ನು ಕೊಂದು ಹಾಕಿದ್ದರು. ಒಬ್ಬರನ್ನು ಗ್ರಾಮಸ್ಥರ ಸಹಾಯದಿಂದ ರಕ್ಷಿಸಲಾಗಿತ್ತು.
ಇದೀಗ ಉಗ್ರರ ಕೃತ್ಯಕ್ಕೆ ಸೇನೆ ಪ್ರತಿಕಾರ ತೀರಿಸಿಕೊಂಡಿದ್ದು, ಒಂದೇ ದಿನ ಐವರು ಉಗ್ರರನ್ನು ಮಟ್ಟ ಹಾಕಿದೆ. ಇನ್ನು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಭಾರತ-ಪಾಕ್ ನಡುವಿನ ಸಂಬಂಧ ಸುಧಾರಣೆ ನಿಟ್ಟಿನಲ್ಲಿ ಇಮ್ರಾನ್ ಖಾನ್ ನೀಡಿದ್ದ ಮಾತುಕತೆ ಆಹ್ವಾನಕ್ಕೆ ಮನ್ನಣೆ ನೀಡಿದ್ದ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವರಾದ ಸುಷ್ಮಾ ಸ್ವರಾಜ್ ಮತ್ತು ಶಾ ಮೊಹಮ್ಮದ್ ಖುರೇಷಿ ನಡುವಿನ ಮಾತುಕತೆಗೆ ಗುರುವಾರವಷ್ಟೇ ಒಪ್ಪಿಗೆ ನೀಡಿತ್ತು. ಆದರೆ, ಒಂದೇ ದಿನದಲ್ಲಿ ಪಾಕ್ ಕಪಟತನ ಬಯಲಾಗಿದ್ದರಿಂದ ಮಾತುಕತೆಯನ್ನು ಭಾರತ ರದ್ದುಪಡಿಸಿತು. 2016ರ ಪಠಾಣ್ ಕೋಟ್ ದಾಳಿಯ ಬಳಿಕ ಭಾರತ-ಪಾಕ್ ನಡುವೆ ಯಾವುದೇ ಮಾತುಕತೆ ನಡೆದಿಲ್ಲ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos