ನವದೆಹಲಿ: ಮಾವೋವಾದಿಗಳು, ನಕಲಿ ಹೋರಾಟಗಾರರು, ಭ್ರಷ್ಠಾಚಾರಿಗಳಿಗೆ ಕಾಂಗ್ರೆಸ್ ಬೆಂಬಲ ನೀಡುತ್ತಾ ಬಂದಿದ್ದು ಎಲ್ಲಾ ಬಗೆಯ ಅವಿವೇಕಿಗಳಿಗೆ ಒಂದೇ ಕಡೆ ಸ್ಥಾನವಿದೆ, ಅದು ಕಾಂಗ್ರೆಸ್ ಮಾತ್ರ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.
ಭೀಮಾ-ಕೊರೆಗಾಂವ್ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿ ಮಹಾರಾಷ್ಟ್ರ ಪೊಲೀಸರು ಬಂಧಿಸಿರುವ ಐವರು ಸಾಮಾಜಿಕ ಹೋರಾಟಗಾರರ ಬಂಧನ ವಿಚಾರದಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದ ಸುಪ್ರೀಂ ತೀರ್ಪಿನ ಬಳಿಕ ಅಮಿತ್ ಶಾ ಈ ಹೇಳಿಕೆ ಬಂದಿದೆ.
ಎಲ್ಲಾ ಬಗೆಯ ಅವಿವೇಕಿಗಳಿಗೆ ಈಗ ಒಂದೇ ಸ್ಥಳ ಉಳಿದಿದೆ, ಮತ್ತು ಅದುವೇ ಕಾಂಗ್ರೆಸ್ ಆಗಿರುತ್ತದೆ.ಕಾಂಗ್ರೆಸ್ ಒಂದು ’ಬ್ರೇಕ್ ಇಂಡಿಯಾ ಗ್ಯಾಂಗ್’ ಆಗಿದ್ದು ಮಾವೋವಾದಿಗಳು, ನಕಲಿ ಹೋರಾಟಗಾರರು, ಮತ್ತು ಭ್ರಷ್ಟಾಚಾರಿಗಳಿಗೆ ಸದಾ ರಕ್ಷಣೆ ನಿಡುತ್ತದೆ. ಇಂತಹಾ ರಾಹುಲ್ ಗಾಂಧಿಯ ಕಾಂಗ್ರೆಸ್ ಗೆ ಸ್ವಾಗತ ಎಂದು ಅಮಿತ್ ಶಾ ತಮ್ಮ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.
ಭೀಮಾ ಕೊರೆಗಾಂವ್ ಎನ್ನುವ ಹ್ಯಾಶ್ ಟ್ಯಾಗ್ ಬಳಸಿರುವ ಶಾ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಆಗಸ್ಟ್ 28 ರಂದು ಪ್ರಕಟಿಸಿದ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಗಾಂಧಿ ಈ ಹಿಂದಿನ ಟ್ವೀಟ್ ನಲ್ಲಿ "ಭಾರತದಲ್ಲಿ ಏಕೈಕ ಎನ್ಜಿಓ ಸಕ್ರಿಯವಾಗಿದ್ದು ಅದುವೇ ಆರ್ ಎಸ್ ಎಸ್ ಎಂದು ವ್ಯಂಗ್ಯವಾಡಿದ್ದರು."ಎಲ್ಲಾ ಇತರೆ ಎನ್ಜಿಓಗಳನ್ನು ಮುಚ್ಚಿ, ಎಲ್ಲಾ ಹೋರಾಟಗಾರರನ್ನು ಜೈಲಿಗಟ್ಟುವ, ದೂರು ಸಲ್ಲಿಸಿದವರನ್ನು ಶೂಟ್ ಮಾಡಿ ಕೊಲ್ಲುವ ನವ ಭಾರತಕ್ಕೆ ಸ್ವಾಗತ" ಎಂದು ರಾಹುಲ್ ಟ್ವೀಟ್ ಮಾಡಿದ್ದರು.
ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಮೂವರು ನ್ಯಾಯಾಧೀಶರ ಪೀಠವು ಶುಕ್ರವಾರದ ತನ್ನ ತೀರ್ಪಿನಲ್ಲಿ ಸಾಮಾಜಿಕ ಹೋರಾಟಗಾರರ ಬಂಧನಕ್ಕೆ ತಡೆ ನೀಡಲುನಿರಾಕರಿಸಿತ್ತು.