ನವದೆಹಲಿ: ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಸೇನೆ ಮತ್ತೊಂದು ಸರ್ಜಿಕಲ್ ದಾಳಿ ನಡೆಸಿದೆಯೇ.. ಇಂತಹುದೊಂದು ವಾದಕ್ಕೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರ ಹೇಳಿಕೆ ಇಂಬು ನೀಡುತ್ತಿದೆ.
ಹೌದು... 2016ರ ಉರಿ ದಾಳಿ ಬೆನ್ನಲ್ಲೇ ನಡೆದಿದ್ದ ಸರ್ಜಿಕಲ್ ದಾಳಿಗೆ ಇಂದಿಗೆ 2 ವರ್ಷ ತುಂಬುತ್ತಿದ್ದು, ಇದರ ನಡುವೆಯೇ ಭಾರತೀಯ ಸೇನೆ ಪಾಕ್ ಗಡಿಯಲ್ಲಿ ಅಂತಹುದೇ ಮತ್ತೊಂದು ದಾಳಿ ನಡೆಸಿದೆ ಎಂಬ ವಾದಗಳು ಕೇಳಿಬರುತ್ತಿವೆ. ಇದಕ್ಕೆ ಕಾರಣ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರ ಹೇಳಿಕೆ.
ಸರ್ಜಿಕಲ್ ದಾಳಿಗೆ 2 ವರ್ಷ ತುಂಬಿರುವ ಹಿನ್ನಲೆಯಲ್ಲಿ ನಿನ್ನೆ ಉತ್ತರ ಪ್ರದೇಶದಲ್ಲಿ ಸಭೆಯೊಂದರಲ್ಲಿ ಮಾತನಾಡಿದ ಕೇಂದ್ರ ಸಚಿವ ರಾಜನಾಥ್ ಸಿಂಗ್, 'ಎರಡು-ಮೂರು ದಿನಗಳ ಹಿಂದೆ ಏನೋ ದೊಡ್ಡದು ನಡೆದಿದೆ. ಆ ಬಗ್ಗೆ ಸದ್ಯ ಬಹಿರಂಗ ಪಡಿಸಲಾಗದು. ಎಲ್ಲವೂ ನಾವಂದುಕೊಂಡ ಹಾಗೇ ಆಗಿದೆ. ಅಷ್ಟೇ ಅಲ್ಲ, ಭವಿಷ್ಯದಲ್ಲಿ ಏನೇನೆಲ್ಲ ಆಗಲಿದೆ ಎಂಬುದನ್ನು ಕಾದು ನೋಡಿ' ಎಂದು ಮಾರ್ಮಿಕವಾಗಿ ಹೇಳಿದ್ದಾರೆ.
ಭಗತ್ ಸಿಂಗ್ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ, ನಗರದಲ್ಲಿ ಅವರ ಪ್ರತಿಮೆ ಅನಾವರಣ ಮಾಡಿ ಮಾತನಾಡಿದ ಕೇಂದ್ರ ಸಚಿವರು, ಎಲ್ಲವೂ ನಾವಂದುಕೊಂಡ ಹಾಗೇ ಆಗಿದೆ ಎಂದು ಹೇಳುವ ಮೂಲಕ ಕುತೂಹಲಕ್ಕೆ ಕಾರಣವಾಗಿದ್ದಾರೆ. 'ನಾವು ನಮ್ಮ ಸೈನಿಕರಿಗೆ ಹೇಳುವುದಿಷ್ಟೇ.. ಮೊದಲ ಗುಂಡು ನಮ್ಮ ಕಡೆಯಿಂದ ಹಾರಬಾರದು. ಆದರೆ ಶತ್ರು ಪಾಳಯದಿಂದ ಒಂದೇ ಒಂದು ಗುಂಡು ಹಾರಿದರೂ ನಮ್ಮ ಗುಂಡುಗಳಿಗೆ ಲೆಕ್ಕ ಹಾಕಬೇಡಿ..
ನಮ್ಮ ಸೈನಿಕನ ರುಂಡ ಕತ್ತರಿಸಿದ ಪಾಕಿಸ್ತಾನಕ್ಕೆ ಬಹುಶಃ ಈಗ ಅರ್ಥವಾಗಿರಬಹುದು, ಭಾರತೀಯ ಸೈನಿಕರ ತಂಟೆಗೆ ಹೋದರೆ ಏನಾಗುತ್ತದೆ ಎಂದು.. ಅಲ್ಲಿ ಏನೋ ದೊಡ್ಡದು ಆಗಿದೆ. ಅದೇನಾಗಿದೆ ಎಂದು ನಾನು ಹೇಳುವುದಿಲ್ಲ. ಎಲ್ಲನೂ ನಾವಂದುಕೊಂಡಂತೆ ಆಗಿದ್ದು, 2-3ದಿನಗಳ ಮುಂಚಿತವಾಗಿಯೇ ಆಗಿದೆ. ನೋಡುತ್ತಿರಿ ಮುಂದೆ ಇನ್ನೂ ಏನೇನಾಗುತ್ತದೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos