ದೆಹಲಿಯ ಸಾದರ್ ಬಜಾರ್ ಮಾರುಕಟ್ಟೆಯಲ್ಲಿ ಪ್ರಧಾನಿ ಮೋದಿಯವರ ಕಟೌಟ್ ತಯಾರಿಸುತ್ತಿರುವುದು
ನವದೆಹಲಿ: ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಭಯೋತ್ಪಾದಕ ದಾಳಿ ನಡೆದ ನಂತರ ಭಾರತ ಪಾಕಿಸ್ತಾನದ ಬಾಲಾಕೋಟ್ ನಲ್ಲಿರುವ ಜೈಶ್ ಎ ಮೊಹಮ್ಮದ್ ಸಂಘಟನೆಯ ಶಿಬಿರ ತಾಣದ ಮೇಲೆ ವಾಯುದಾಳಿ ನಡೆಸಿದ್ದು, ಹೊಸ ಉದ್ಯೋಗ ಕೋಟಾ ಮತ್ತು ರೈತರಿಗೆ ನಗದು ಮೊತ್ತ ವಿತರಣೆಯ ಭರವಸೆ ಲೋಕಸಭೆ ಚುನಾವಣೆಯ ಸನ್ನಿಹಿತದ ಹೊಸ್ತಿಲಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆಯನ್ನು ಉತ್ತುಂಗಕ್ಕೆ ಏರಿಸಿದೆ ಎಂದು ಸಮೀಕ್ಷೆಯೊಂದು ತಿಳಿಸಿದೆ.
ಸಮೀಕ್ಷೆ ನಡೆಸಿದ ಶೇಕಡಾ 43ರಷ್ಟು ಮಂದಿ ಅಥವಾ ಸಮೀಕ್ಷೆಗೆ ಪ್ರತಿಕ್ರಿಯೆ ನೀಡಿದ 10 ಮಂದಿಯಲ್ಲಿ 4ಕ್ಕಿಂತ ಹೆಚ್ಚಿನ ಜನರು ನರೇಂದ್ರ ಮೋದಿಯವರು ಮತ್ತೆ ಪ್ರಧಾನಿಯಾಗಬೇಕೆಂದು ಬಯಸುತ್ತಿದ್ದಾರೆ. ಇದು 2014ರ ಲೋಕಸಭೆ ಚುನಾವಣೆಗಿಂತ ಶೇಕಡಾ 7ರಷ್ಟು ಹೆಚ್ಚಿದೆ. ದೆಹಲಿ ಮೂಲದ ಲೋಕ್ನೀತಿ ಸಂಶೋಧನಾ ಸಂಸ್ಥೆ ಕಳೆದ ಮಾರ್ಚ್ 24ರಿಂದ ಮಾರ್ಚ್ 31ರವರೆಗೆ ನಡೆಸಿದ ಸಮೀಕ್ಷೆಯಿಂದ ಇದು ತಿಳಿದುಬಂದಿದೆ. ದೇಶದ 29 ರಾಜ್ಯಗಳಲ್ಲಿ 19 ರಾಜ್ಯಗಳಲ್ಲಿ 10 ಸಾವಿರದ 010 ಮಂದಿ ಮೇಲೆ ಈ ಸಮೀಕ್ಷೆ ನಡೆಸಲಾಯಿತು.
ಮೋದಿ ಸರ್ಕಾರ ಕಳೆದ ಜನವರಿ 7ರಿಂದ ಫೆಬ್ರವರಿ 26ರವರೆಗೆ ತೆಗೆದುಕೊಂಡ ಪ್ರಮುಖ ಮೂರು ನಿರ್ಧಾರಗಳು ಈ ಬಾರಿಯ ಚುನಾವಣಾ ದಿಕ್ಕನ್ನು ಬದಲಾಯಿಸುವ ಸಾಧ್ಯತೆಯಿದೆ.
2019ರ ಮೊದಲ ತ್ರೈಮಾಸಿಕದಲ್ಲಿ ಭಾರತೀಯ ಜನತಾ ಪಾರ್ಟಿ ನೇತೃತ್ವದ ಸರ್ಕಾರ ದೇಶದಲ್ಲಿ ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದವರಿಗೆ ಶೇಕಡಾ 10ರಷ್ಟು ಮೀಸಲಾತಿ ನೀಡಲು ನಿರ್ಧರಿಸಿತು. ರೈತರ ಖಾತೆಗಳಿಗೆ ವರ್ಷದಲ್ಲಿ 6 ಸಾವಿರ ರೂಪಾಯಿ ನೀಡುವುದಾಗಿ ಘೋಷಣೆ ಮಾಡಿತು ಮತ್ತು ಪುಲ್ವಾಮಾ ಭಯೋತ್ಪಾದಕ ದಾಳಿ ನಂತರ ಪಾಕಿಸ್ತಾನದ ಉಗ್ರ ನೆಲೆ ಮೇಲೆ ನಡೆಸಿದ ವಾಯುದಾಳಿ ಮೋದಿ ಜನಪ್ರಿಯತೆಯನ್ನು ಹೆಚ್ಚಿಸಿದೆ. ಮತ್ತೊಮ್ಮೆ ಅವರು ಪ್ರಧಾನ ಮಂತ್ರಿಯಾದರೆ ದೇಶವನ್ನು ಉತ್ತಮವಾಗಿ ಮುನ್ನಡೆಸಬಹುದು ಎಂಬ ಭರವಸೆ ಜನರಲ್ಲಿ ಮೂಡಿಸಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos