ಭುವನೇಶ್ವರ: ಅಪರಿಚಿತ ದುಷ್ಕರ್ಮಿಗಳು ಸ್ಥಳೀಯ ಬಿಜೆಪಿ ಮುಖಂಡನ ಮೇಲೆ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಒಡಿಶಾದ ಖುರ್ದಾ ಪಟ್ಟಣದಲ್ಲಿ ನಡೆದಿದೆ. ಪಕ್ಷದ ಮುಖಂಡನ ಕೊಲೆ ಬಳಿಕ ಕೇಸರಿ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ಬಿಜೆಪಿ ಹಿರಿಯ ನಾಯಕ ಮುಂಗಲಿ ಜೆನ ಅವರನ್ನು ಅಪರಿಚಿತ ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ.
ಈ ಘಟನೆಯನ್ನೂ ಖಂಡಿಸಿ ಬಿಜೆಪಿ 14 ಗಂಟೆಗಳ ಖುರ್ದಾ ಬಂದ್ಗೆ ಕರೆ ನೀಡಿದ್ದು, ಕೂಡಲೇ ಕೊಲೆಪಾತಕರನ್ನು ಬಂಧಿಸಬೇಕು ಮತ್ತು ಅವರ ವಿರುದ್ಧ ಸೂಕ್ರ ಕ್ರಮ ಜರುಗಿಸಬೇಕು ಎಂದು ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಮೂಲಗಳ ಪ್ರಕಾರ, ಸ್ಕೂಟರ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಬಹಳ ಹತ್ತಿರದಿಂದ ಗುಂಡು ಹಾರಿಸಿದರು. ಇದರ ಪರಿಣಾಮ, ಮುಂಗಲಿ ಜೆನ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಿಜೆಪಿ ಕಚೇರಿ ಹಾಗೂ ಎಸ್ಪಿ ಕಚೇರಿ ಬಳಿಯೇ ಈ ಘಟನೆ ಜರುಗಿದೆ. ಈ ಸಮಯದಲ್ಲಿ ಕುದ್ರಾ ಬಿಜೆಪಿ ಅಭ್ಯರ್ಥಿ ಕಲು ಚರಣ್ ಮಾತ್ರ ಹಾಜರಿದ್ದರು
ಅಪರಿಚಿತ ದುಷ್ಕರ್ಮಿಗಳು ಬಹಳ ಹತ್ತಿರದಿಂದ ಜೆನ ಅವರ ಮೇಲೆ ಗುಂಡಿನ ಮಳೆಗರೆದು ನಂತರ ಮಿಂಚಿನ ವೇಗದಲ್ಲಿ ಪರಾರಿಯಾದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಆದರೆ ಈ ಘಟನೆಯಲ್ಲಿ ಬಿಜೆಪಿ ಅಭ್ಯರ್ಥಿ ಆಶ್ಚರ್ಯಕರ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನಾ ಸ್ಥಳಕ್ಕೆ ಕೂಡಲೇ ಪೊಲೀಸರು ಧಾವಿಸಿ ಮೃತ ಜೆನ ಅವರ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ, ಹಂತಕರ ಪತ್ತೆಗೆ ವ್ಯಾಪಕ ಬಲೆ ಬೀಸಿದ್ದಾರೆ.
ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಈ ದಾಳಿಯನ್ನು ತೀವ್ರವಾಗಿ ಖಂಡಿಸಿ, ಅಪರಾಧಿಗಳ ವಿರುದ್ಧ ಸೂಕ್ರ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos