ದೇಶ

ಶ್ರೀಮಂತರು, ಪ್ರಬಲರು ಬೆಂಕಿಯೊಂದಿಗೆ ಸರಸವಾಡುತ್ತಿದ್ದಾರೆ: ಸಿಜೆಐ ವಿರುದ್ಧ ಆರೋಪ ಪ್ರಕರಣ ಸಂಬಂಧ 'ಸುಪ್ರೀಂ' ಆಕ್ರೋಶ

Srinivasamurthy VN
ನವದೆಹಲಿ: ದೇಶದ ಶ್ರೀಮಂತರು ಮತ್ತು ಪ್ರಭಾವಿಗಳು ಬೆಂಕಿಯೊಂದಿಗೆ ಸರಸವಾಡುತ್ತಿದ್ದು, ಅದು ನಡೆಯಲು ಅವಕಾಶ ನೀಡುವುದಿಲ್ಲ ಎಂದು ಸಿಜೆಐ ರಂಜನ್ ಗಗೋಯ್ ಅವರ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣದ ಹಿನ್ನಲೆಯಲ್ಲಿ ಸುಪ್ರೀಂಕೋರ್ಟ್ ಇಂದು ಆಕ್ರೋಶ ವ್ಯಕ್ತಪಡಿಸಿದೆ.
ಪ್ರಕರಣ ಸಂಬಂಧ ಇಂದು ನಡೆದ ವಿಚಾರಣೆಯಲ್ಲಿ ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್, 'ಕಳೆದ ಮೂರು ನಾಲ್ಕು ವರ್ಷದಿಂದ ಸಂಸ್ಥೆಯ ಮೇಲೆ ವ್ಯವಸ್ಥಿತ ದಾಳಿಯಾಗುತ್ತಿದೆ ಎಂದು ಹೇಳಿದೆ. ಮುಖ್ಯ ನ್ಯಾಯಮೂರ್ತಿ ರಂಜನ್​ ಗೋಗೊಯ್ ಅವರ ವಿರುದ್ಧ ಮಾಡಿಲಾಗಿರುವ ಲೈಂಗಿಕ ದೌರ್ಜನ್ಯ ಆರೋಪ ಒಂದು ವ್ಯವಸ್ಥಿತ ಪಿತೂರಿ ಹಾಗೂ ಷಡ್ಯಂತ್ರ ಎಂದು ವಕೀಲರು ವಾದ ಮಂಡನೆ ಕೇಳಿದ ಬಳಿಕ ಸುಪ್ರೀಂಕೋರ್ಟ್​ ಹೀಗೆ ಹೇಳಿದೆ.
'ಪ್ರಭಾವಶಾಲಿ ಜನರನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ಮತ್ತು ದೇಶದ ಸರ್ವೋಚ್ಚ ನ್ಯಾಯಾಲಯವನ್ನು ಮುನ್ನಡೆಸಲು ಅವರಿಗೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ನ್ಯಾ.ಅರುಣ್​ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ ಹೇಳಿದೆ. ಅಲ್ಲದೆ ಅಂತಹವರ ವಿರುದ್ಧ ಕ್ರಮ ತೆಗೆದುಕೊಳ್ಳುವ ಸಮಯ ಈಗ ಬಂದಿದ್ದು, ಪ್ರಬಲ ಮತ್ತು ಶ್ರೀಮಂತ ವ್ಯಕ್ತಿಗಳು ಸುಪ್ರೀಂಕೋರ್ಟ್ ​ಅನ್ನು ಮುನ್ನಡೆಸಲು ಸಾಧ್ಯವಿಲ್ಲ ಎಂದು ಹೇಳುವ ದಿನ ಬಂದಿದೆ. ಅವರು ಬೆಂಕಿಯೊಂದಿಗೆ ಆಟವಾಡುತ್ತಿದ್ದಾರೆ ಎಂದು ಪೀಠ ಆಕ್ರೋಶ ವ್ಯಕ್ತಪಡಿಸಿದೆ.
ಅಂತೆಯೇ ಪೀಠವು ಇಂದು ಮಧ್ಯಾಹ್ನ 2 ಗಂಟೆಗೆ ಆದೇಶ ನೀಡಲಿದೆ. ಆನಂತರ ಆರೋಪಕ್ಕೆ ಸಂಬಂಧಿಸಿದಂತೆ ರಚಿಸಲಾಗಿರುವ ಸಮಿತಿಯು ತನಿಖೆ ನಡೆಸಲಿದೆ ಎಂದು ಹೇಳಿದೆ. ಸಿಜೆಐ ಮೇಲೆ ಮಾಡಲಾಗಿರುವ ಲೈಂಗಿಕ ದೌರ್ಜನ್ಯ ಆರೋಪ ಒಂದು ಷಡ್ಯಂತ್ರ. ರಂಜನ್​ ಗೋಗೊಯ್​ ಅವರ ಮನೆ ಕಚೇರಿಯಲ್ಲೂ ಕೆಲಸ ಮಾಡುತ್ತಿದ್ದ ಕೋರ್ಟ್ ನ ಮಾಜಿ ಸಿಬ್ಬಂದಿ ಮಾಡಿರುವ ಆರೋಪ ಪಿತೂರಿ ಎಂದು ವಕೀಲ ಉತ್ಸವ್ ಬೈನ್ಸ್ ಈ ಹಿಂದೆ​ ಹೇಳಿದ್ದರು.
ಬೈನ್ಸ್​ ಅವರು ಬುಧವಾರ ಇಬ್ಬರು 'ಕೋರ್ಟ್​ ಮಾಸ್ಟರ್ಸ್' ​ಗಳು ಅನಿಲ್ ಅಂಬಾನಿಗೆ ಸಂಬಂಧಿಸಿದ ಪ್ರಕರಣದಲ್ಲಿ ತೀರ್ಪನ್ನು ತಿರುಚುವಂತೆ ಲಾಬಿ ಮಾಡಿದ್ದರು. ಆದರೆ, ಅದು ಸಾಧ್ಯವಾಗದಿದ್ದಾಗ ಸಿಜೆಐ ವಿರುದ್ಧ ಈ ಷಡ್ಯಂತ್ರ ಹೆಣೆಯಲಾಗಿದೆ. ಇದರಲ್ಲಿ ಕೋರ್ಟ್ ​ನ ಮಹಿಳಾ ಸಿಬ್ಬಂದಿಯೂ ಸೇರಿದ್ದಾರೆ ಎಂದು ಹೇಳಿದ್ದರು. ಈ ಸಂಬಂಧ ಬೈನ್ಸ್​ ಅವರು ಮುಚ್ಚಿದ ಲಕೋಟೆಯಲ್ಲಿ ಸಾಕ್ಷ್ಯವನ್ನು ಪೀಠದ ಮುಂದೆ ಸಲ್ಲಿಕೆ ಮಾಡಿದ್ದರು.
SCROLL FOR NEXT