ಭುವನೇಶ್ವರ್: ಭಾರತೀಯ ಪುರಾಣಗಳಲ್ಲಿ ಪರಮೇಶ್ವರ ಮತ್ತು ದೇವಿ ಪಾರ್ವತಿ ಶ್ರೇಷ್ಠ ದಂಪತಿಗಳು ಎಂದೇ ಪ್ರಖ್ಯಾತಿ... ಆದರೆ ಒಡಿಶಾದ ಈ ಒಂದು ಭಾಗದಲ್ಲಿ ಶಿವ-ಪಾರ್ವತಿಯರನ್ನು ದಂಪತಿಗಳಲ್ಲ.. ಬದಲಿಗೆ ಸಹೋದರ-ಸಹೋದರಿ ಎಂದು ಪೂಜಿಸುತ್ತಿದ್ದಾರೆ.
ಹೌದು.. ಅಚ್ಚರಿಯಾದರೂ ಇದು ನಿಜ.. ಒಡಿಶಾದ ಕೊರಾಪುಟ್ ನಲ್ಲಿ ವಾಸಿಸುತ್ತಿರುವ ಗಿರ್ಲಿ ಗುಮ್ಮಾ ಬುಡುಕಟ್ಟು ನಿವಾಸಿಗಳು ಶಿವ ಮತ್ತು ಪಾರ್ವತಿಯರನ್ನು ಸಹೋದರ-ಸಹೋದರಿ ಎಂದು ನಂಬಿ ಪೂಜಿಸುತ್ತಿದ್ದಾರೆ. ಅವರ ಈ ನಂಬಿಕೆಗೆ ಏನು ಕಾರಣ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಪುರಾವೆಗಳು ಸಿಕ್ಕಿಲ್ಲವಾದರೂ, ನೂರಾರು ವರ್ಷಗಳಿಂದ ಈ ಬುಡಕಟ್ಟು ಜನಾಂಗ ಇದೇ ರೀತಿಯಲ್ಲೇ ಪೂಜಿಸುತ್ತಾ ಬಂದಿದ್ದಾರೆ. ಅಲ್ಲದೆ ಶಿವ-ಪಾರ್ವತಿಗಾಗಿ ವಿಶಿಷ್ಠ ರೀತಿಯಲ್ಲಿ ದೇಗುಲ ಕೂಡ ಕಟ್ಟಿದ್ದಾರೆ.
ಇಲ್ಲಿನ ಬನದುರ್ಗ ಪ್ರಾಂತ್ಯದ ಗುಹೆಯೊಂದರಲ್ಲಿ ಈ ವಿಶಿಷ್ಟ ದೇಗುಲವಿದ್ದು, ಇಲ್ಲಿ ಶಿವ-ಪಾರ್ವತಿಯರನ್ನು ಸಹೋದರ-ಸಹೋದರಿ ಎಂದು ಪೂಜಿಸಲಾಗುತ್ತಿದೆ. ಈ ಬಡುಕಟ್ಟು ನಿವಾಸಿಗಳ ನಂಬಿಕೆಗೆ ಯಾವುದೇ ಐತಿಹಾಸಿಕ ಪುರಾವೆಗಳು ಸಿಕ್ಕಿಲ್ಲವಾದರೂ, ಇಲ್ಲಿನವರ ನಂಬಿಕೆಯಂತೆ ಒಮ್ಮೆ ಶಿವ-ಪಾರ್ವತಿಯರು ಭೂಲೋಕದಲ್ಲಿ ಸೋಹದರ-ಸಹೋದರಿಯಾಗಿ ಜನಿಸಲು ನಿರ್ಧರಿಸದರಂತೆ. ಅದರಂತೆ ಭೂಮಿಯಲ್ಲಿ ಹೊಸ ಅವತಾರವೆತ್ತಿದ್ದರಂತೆ. ಇಲ್ಲಿನ ಬನದುರ್ಗ ಗುಹೆಯಲ್ಲಿ ಶಿವ ಮತ್ತು ದೇವಿ ಪಾರ್ವತಿ ಆಕೆಯ ಪೋಷಕರೊಂದಿಗೆ ಜೀವಿಸುತ್ತಿದ್ದರಂತೆ. ಅಲ್ಲದೇ ಇದೇ ಗುಹೆಯಲ್ಲೇ ಶಿವ ತಪ್ಪಸ್ಸಿಗೆ ಕುಳಿತಿದ್ದರು ಎಂದು ಇಲ್ಲಿನ ನಿವಾಸಿಗಳು ನಂಬಿದ್ದಾರೆ.
ಅಂದಿನಿಂದ ಈ ಗುಹೆಯಲ್ಲಿ ನಿರಂತರವಾಗಿ ಶಿವ-ಪಾರ್ವತಿಯರನ್ನು ಸಹೋದರ-ಸಹೋದರಿ ಎಂದು ಪೂಜಿಸುತ್ತಾ ಬರಲಾಗಿದೆ. ಇದೇ ಕಾರಣಕ್ಕೆ ಈ ಗುಹೆಗೆ ಭಾಯ್-ಭೌನಿ (ಸಹೋದರ-ಸಹೋದರಿ) ದೇಗುಲ ಎಂದು ಕರೆಯಲಾಗುತ್ತಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಗಿರ್ಲಿ ಗುಮ್ಮಾ ಬುಡಕಟ್ಟು ನಿವಾಸಿಗಳ ಧಾರ್ಮಿಕ ಗುರು ಬಸುದೇವ್ ಅವರು, ಶಿವ-ಪಾರ್ವತಿಯರ ಮತ್ತೊಂದು ಅವತಾರವಿದು. ನಮಗೆ ಬುದ್ದಿ ಬಂದಾಗಿನಿಂದಲೂ ಇದೇ ರೀತಿಯಲ್ಲಿ ಪೂಜಿಸಲಾಗುತ್ತಿದೆ. ನಮ್ಮ ಪೂರ್ವಿಕರೂ ಕೂಡ ಶಿವ ಪಾರ್ವತಿಯರನ್ನು ಇದೇ ರೀತಿ ಪೂಜಿಸುತ್ತಿದ್ದರು. ಮುಂದೆಯೂ ಕೂಡ ಇದೇ ರೀತಿ ಪೂಜೆ ಸಾಗುತ್ತದೆ ಎಂದು ಹೇಳಿದ್ದಾರೆ.
ಇಲ್ಲಿನ ಮತ್ತೊಂದು ವಿಶೇಷವೆಂದರೆ ಇಲ್ಲಿ ಹಿಂದೂ ವರ್ಷದ ಎಲ್ಲ 12 ತಿಂಗಳೂಗಳು ಶಿವ-ಪಾರ್ವತಿಯರಿಗೆ ವಿಶೇಷ ಎಂದು ಪೂಜಿಸುತ್ತಾರೆ. ಅಲ್ಲದೆ ಶಿವನಿಗೆ ಕೋಣವನ್ನು ಬಲಿ ಕೊಟ್ಟು ಪೂಜಿಸುತ್ತಾರೆ. ದಸರಾ ಸಂದರ್ಭದಲ್ಲಿ ಇಲ್ಲಿ ಹಬ್ಬ ನಡೆಯುತ್ತದೆ. ಇಲ್ಲಿನ ವಿಗ್ರಹಗಳಿಗೆ ಸ್ಥಳೀಯ ಜೇಪೋರ್ ರಾಜಮನೆತನದವರು ಶತಮಾನಗಳಿಂದ ಪೂಜೆ ಸಲ್ಲಿಸುತ್ತಿದ್ದರಂತೆ. ಇನ್ನು ಈ ದೇಗುಲ ಮತ್ತು ಅದರಲ್ಲಿನ ವಿಗ್ರಹಗಳ ಇತಿಹಾಸದ ಕುರಿತು ಉತ್ಖನನ ನಡೆಸಿದರೆ ಅದರ ಹಿಂದಿನ ಮಾಹಿತಿ ಲಭ್ಯವಾಗುತ್ತದೆ ಎಂದು ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಸಿಹೆಚ್ ಸಂತಕಾರ್ ಹೇಳಿದ್ದಾರೆ.