ನವದೆಹಲಿ: ಕಾಶ್ಮೀರ ವಿವಾದ ಸಂಬಂಧ ಭಾರತ ಪಾಕ್ ಒಪ್ಪಿದರೆ ಮಧ್ಯ ಪ್ರವೇಶಕ್ಕೆ ಸಿದ್ಧ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗೆ ಖಡಕ್ ತಿರುಗೇಟು ನೀಡಿರುವ ಭಾರತ ದ್ವಿಪಕ್ಷೀಯ ಮಾತುಕತೆ ಮೂಲಕವೇ ಕಾಶ್ಮೀರ ಸಮಸ್ಯೆ ಇತ್ಯರ್ಥ, 3ನೇ ವ್ಯಕ್ತಿಯ ಸಂಧಾನ ಬೇಕಿಲ್ಲ ಎಂದು ಹೇಳಿದೆ.
ಈ ಬಗ್ಗೆ ಅಮೆರಿಕಕ್ಕೆ ಖಡಕ್ ಸೂಚನೆ ನೀಡಿರುವ ಭಾರತ ಯಾವುದೇ ಕಾರಣಕ್ಕೂ ಕಾಶ್ಮೀರ ವಿಚಾರದಲ್ಲಿ ಭಾರತ ಮೂರನೇ ವ್ಯಕ್ತಿಯ ಮಧ್ಯ ಪ್ರವೇಶವನ್ನು ಒಪ್ಪುವುದಿಲ್ಲ. ಪರಸ್ಪರ ದ್ವಿಪಕ್ಷೀಯ ಮಾತುಕತೆ ಮೂಲಕವೇ ಸಮಸ್ಯೆ ಇತ್ಯರ್ಥ ಪಡಿಸಿಕೊಳ್ಳುತ್ತೇವೆ. ನಮ್ಮ ನಿಲುವಿನಲ್ಲಿ ಯಾವುದೇ ರೀತಿಯ ಬದಲಾವಣೆ ಇರುವುದಿಲ್ಲ ಎಂದು ಹೇಳಿದ್ದಾರೆ.
ಪ್ರಸ್ತುತ ಭಾರತ ಪ್ರವಾಸದಲ್ಲಿರುವ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೋಗೆ ವಿದೇಶಾಂಗ ಸಚಿವ ಜೈ ಶಂಕರ್ ಈ ರೀತಿ ತಿರುಗೇಟು ನೀಡಿದ್ದು, ನಮ್ಮ ಆಂತರಿಕ ವಿಚಾರಗಳ ಕುರಿತು ಬಹಿರಂಗ ಚರ್ಚೆಯನ್ನು ನಾವು ಎಂದಿಗೂ ಬಯಸುವುದಿಲ್ಲ. ಅದೇ ರೀತಿ ಹೊರಗಿನ ವ್ಯಕ್ತಿಗಳು ಇದರ ಬಗ್ಗೆ ಚರ್ಚೆ ಮಾಡುವುದನ್ನೂ ಭಾರತ ವಿರೋಧಿಸುತ್ತದೆ ಎಂದು ಜೈ ಶಂಕರ್ ಖಡಕ್ ತಿರುಗೇಟು ನೀಡಿದ್ದಾರೆ.
ಇನ್ನು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರ ಅಮೆರಿಕ ಪ್ರವಾಸದ ವೇಳೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಂಧಾನದ ಆಫರ್ ನೀಡಿದ್ದರು. ಇದೀಗ ಅದೇ ಮಾತನ್ನು ಪುನರುಚ್ಛರಿಸಿರುವ ಟ್ರಂಪ್ ತಮ್ಮ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೋ ಭಾರತ ಪ್ರವಾಸದಲ್ಲಿರುವಾಗಲೇ ಮತ್ತೆ ಕಾಶ್ಮೀರ ವಿಚಾರವಾಗಿ ಉಭಯ ದೇಶಗಳು ಒಪ್ಪಿದರೆ ತಾನು ಮಧ್ಯಸ್ಛಿಕೆ ವಹಿಸಿಕೊಳ್ಳುತ್ತೇನೆ ಎಂದು ಹೇಳಿ ಭಾರತದ ಕೆಂಗಣ್ಣಿಗೆ ಗುರಿಯಾಗಿದ್ದಾರೆ.