ದೇಶ

ಸುಪ್ರೀಂ ಕೋರ್ಟ್ ವಕೀಲರಿಗೆ 1.10 ಲಕ್ಷ ಪರಿಹಾರ ನೀಡುವಂತೆ ಶರವಣ ಭವನ್ ಗೆ ಆದೇಶ, ಕಾರಣ ಏನು ಗೊತ್ತಾ?

Lingaraj Badiger
ಚೆನ್ನೈ: ಸುಪ್ರೀಂ ಕೋರ್ಟ್ ವಕೀಲರೊಬ್ಬರಿಗೆ 1.10 ಲಕ್ಷ ರುಪಾಯಿ ಪರಿಹಾರ ನೀಡುವಂತೆ ದಕ್ಷಿಣ ಭಾರತದ ಖ್ಯಾತ ಹೋಟೆಲ್ ಗಳಲ್ಲಿ ಒಂದಾದ ಶರವಣ ಭವನ್ ಗೆ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆ ಆದೇಶಿಸಿದೆ.
ತಮಿಳುನಾಡು ರಾಜ್ಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ, ಮಾನಸಿಕವಾಗಿ ಕಿರುಕುಳ ನೀಡಿದ್ದಕ್ಕೆ 1 ಲಕ್ಷ ರುಪಾಯಿ ಹಾಗೂ ಕಾನೂನು ವೆಚ್ಚಕ್ಕಾಗಿ 10 ಸಾವಿರ ರುಪಾಯಿಯನ್ನು ಅರ್ಜಿದಾರರಾದ ಎಸ್ ಕೆ ಸಾಮಿ ಅವರಿಗೆ ನೀಡುವಂತೆ ಶರವಣ ಭವನ್ ಗೆ ಸೂಚಿಸಿದೆ.
ಸುಪ್ರೀಂ ಕೋರ್ಟ್ ವಕೀಲರಾಗಿರುವ ಎಸ್ ಕೆ ಸಾಮಿ ಅವರಿಗೆ ಶರವಣ ಭವನ್ ಕಳಪೆ ಆಹಾರ ಪೂರೈಸಿತ್ತು. ಇದರಿಂದ ಅವರಿಗೆ ಫೂಡ್ ಪಾಯಿಸನ್ ಆಗಿ ಆಸ್ಪತ್ರೆಗೆ ದಾಖಲಾಗಿದ್ದರು. 
ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ತಮಗೆ ಕಳಪೆ ಆಹಾರ ಪೂರೈಸಿದ್ದ ಶರವಣ ಭವನ್ ವಿರುದ್ಧ  ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಅರ್ಜಿ ಸಲ್ಲಿಸಿದ್ದರು. ಅಲ್ಲದೆ ತಮ್ಮ ಅನಾರೋಗ್ಯ ಹಾಗೂ ಮಾನಸಿಕ ಕಿರುಕುಳಕ್ಕೆ ಕಾರಣವಾಗಿದ್ದ ಶರವಣ ಭವನ್ ನಿಂದ 90 ಲಕ್ಷ ರುಪಾಯಿ ಪರಿಹಾರ ಕೋರಿದ್ದರು. 
2014ರ ಅಕ್ಟೋಬರ್ ನಲ್ಲಿ ಅಣ್ಣಾ ಸಲೈನಲ್ಲಿರುವ ಶರವಣ ಭವನ್ ನಲ್ಲಿ ಸಾಮಿ ಆಹಾರ ಸೇವಿಸಿದ್ದರು. ಈ ವೇಳೆ ಅವರ ಆಹಾರದಲ್ಲಿ ಕೂದಲು ಪತ್ತೆಯಾಗಿತ್ತು. ಅದನ್ನು ಸಿಬ್ಬಂದಿಗೆ ತಿಳಿಸಿದ ನಂತರ ಅವರಿಗೆ ಮತ್ತೊಂದು ಪ್ಲೇಟ್ ತಿಂಡಿ ನೀಡಲಾಗಿತ್ತು. ತಿಂಡಿ ತಿಂದ ಬಳಿಕೆ ನನಗೆ ಹೊಟ್ಟೆ ನೋವು, ವಾಂತಿ ಆಗಿತ್ತು. ನಂತರ ಜ್ವರ ಹಾಗೂ ದೇಹದಲ್ಲಿ ಗುಳ್ಳೆಗಳು ಕಾಣಿಸಿಕೊಂಡಿದ್ದವು ಎಂದು ಸಾಮಿ ಹೇಳಿದ್ದಾರೆ.
ಈ ಸಂಬಂಧ ಶರವಣ ಭವನ್ ವಿರುದ್ಧ ಕೇಸ್ ದಾಖಲಿಸಿದ್ದ ಸಾಮಿ, ಕಳಪೆ ಆಹಾರ ಪೂರೈಸಿದ್ದಕ್ಕೆ 60 ಲಕ್ಷ ರುಪಾಯಿ ಹಾಗೂ ಅನಾರೋಗ್ಯ ಮತ್ತು ಮಾನಸಿಕ ಹಿಂಸೆ ಅನುಭವಿಸಿದ್ದಕೆ 30 ಲಕ್ಷ ರುಪಾಯಿ ಪರಿಹಾರ ಕೇಳಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್ ಅಂತಿಮವಾಗಿ 1.10 ಲಕ್ಷ ರುಪಾಯಿ ಪರಿಹಾರಕ್ಕೆ ಸೂಚಿಸಿದೆ.
SCROLL FOR NEXT