ಅಯೋಧ್ಯೆ ವಿಚಾರಣೆ: ನಿರ್ಮೋಹಿ ಅಖಾಡದಿಂದ ಹಕ್ಕು ಪ್ರತಿಪಾದನೆ, ಸುಪ್ರೀಂ ಗೆ ಮಹತ್ವದ ಮಾಹಿತಿ!
ನವದೆಹಲಿ: ಅಯೋಧ್ಯೆಯ ವಿವಾದಿತ ಪ್ರದೇಶದ ಮೇಲೆ ಸಂಪೂರ್ಣ ಹಕ್ಕನ್ನು ಪ್ರತಿಪಾದಿಸಿರುವ ನಿರ್ಮೋಹಿ ಅಖಾಡ ವಿವಾದಿತ ಸ್ಥಳಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಗೆ ಆ.06 ರಂದು ಮಹತ್ವದ ಮಾಹಿತಿ ನೀಡಿದೆ.
1934 ರಲ್ಲಿ ಮುಸ್ಲಿಮರು ಬಾಬ್ರಿ ಮಸೀದಿಯ ಜಾಗದಲ್ಲಿ ಪ್ರತಿ ದಿನ 5 ಬಾರಿ ನಮಾಜ್ ಮಾಡುವುದನ್ನು ಬಿಟ್ಟಿದ್ದರು. 1949 ರ ಡಿಸೆಂಬರ್ ವೇಳೆಗೆ ಶುಕ್ರವಾರದ ಪ್ರಾರ್ಥನೆಯನ್ನೂ ಬಿಟ್ಟು, ಆ ಜಾಗ ಪರಿತ್ಯಕ್ತವಾಗಿತ್ತು ಎಂದು ಮಾಹಿತಿ ನೀಡಿದೆ.
ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ಇದ್ದ ಸಾಂವಿಧಾನಿಕ ಪೀಠಕ್ಕೆ ಮಾಹಿತಿ ಸಲ್ಲಿಸಿರುವ ನಿರ್ಮೋಹಿ ಅಖಾಡ, ವಿವಾದಿತ ಪ್ರದೇಶದ ಮೇಲೆ ತನ್ನ ಹಕ್ಕನ್ನು 1934 ರಲ್ಲೇ ಪ್ರತಿಪಾದಿಸಿದ್ದಾಗಿಯೂ, ಆ ನಂತರ 1961 ರಲ್ಲಿ ಸುನ್ನಿ ವಕ್ಫ್ ಬೋರ್ಡ್ ಆ ಜಾಗದ ಮೇಲೆ ಹಕ್ಕು ಪ್ರತಿಪಾದನೆ ಮಾಡಿತ್ತು ಎಂದು ಹೇಳಿದೆ.
1949 ರ ಡಿಸೆಂಬರ್ 22-23 ರಂದು ರಾತ್ರಿ ಮಸೀದಿಯಲ್ಲಿ ರಾಮನ ವಿಗ್ರಹಗಳನ್ನು ಸ್ಥಾಪಿಸಲಾಯಿತು ಎಂದೂ ನಿರ್ಮೋಹಿ ಅಖಾಡದ ಪರ ವಕೀಲರು ಕೋರ್ಟ್ ಗೆ ಮಾಹಿತಿ ನೀಡಿದ್ದಾರೆ. ಯಾವ ಜಾಗದಲ್ಲಿ ನಿತ್ಯ ಪ್ರಾರ್ಥನೆ ನಡೆಯುವುದಿಲ್ಲವೋ ಅದನ್ನು ಮಸೀದಿ ಎಂದು ಪರಿಗಣಿಸಲು ಸಾಧ್ಯವಿಲ್ಲ, ನಾವು 1934 ರಿಂದಲೂ ಅಯೋಧ್ಯೆಯ ವಿವಾದಿತ ಪ್ರದೇಶದ ಮೇಲೆ ಹಕ್ಕು ಪ್ರತಿಪಾದನೆ ಮಾಡುತ್ತಿದ್ದೆವೆ, ಅಲ್ಲಿ ನಮಾಜ್ ನಡೆಯುತ್ತಿರಲಿಲ್ಲ ಎಂಬುದು ನಿರ್ಮೋಹಿ ಅಖಾಡಾದ ಪರ ವಕೀಲ ಸುಶೀಲ್ ಜೈನ್ ವಾದವಾಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos