ದೇಶ

ಅಸಹಿಷ್ಣುತೆ, ಅನ್ಯಾಯ, ತಾರತಮ್ಯದ ವಿರುದ್ಧ ಧ್ವನಿ ಎತ್ತಿ: ಸೋನಿಯಾ ಗಾಂಧಿ

Lingaraj Badiger

ನವದೆಹಲಿ: ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆ ಮತ್ತು ತಾರತಮ್ಯದ ವಿರುದ್ದ ಜನರು ಗಟ್ಟಿಯಾಗಿ ಧ್ವನಿ ಎತ್ತಬೇಕು ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಗುರುವಾರ ಕರೆ ನೀಡಿದ್ದಾರೆ.

ಸ್ವಾತಂತ್ರ್ಯ ದಿನದ ಸಂದೇಶದಲ್ಲಿ, ಈ ವಿಷಯ ತಿಳಿಸಿದ ಅವರು, ಎಲ್ಲಾ ರಂಗಗಳಲ್ಲಿಯೂ ಇದು ಮುಂದುವರಿದಿದೆ. ಆದರೆ ಮೂಲ ತತ್ವವಾದ ಸತ್ಯ, ಅಹಿಂಸೆ, ಅನುಕಂಪ ದೇಶಭಕ್ತಿಯ ತತ್ವಗಳನ್ನು ಸರಕಾರ ಕಡೆಗಣಿಸುತ್ತಿದೆ ಎಂದು ದೂರಿದರು.

ದೇಶದಲ್ಲಿ ಧರ್ಮಾಂಧತೆ, ಮೂಢನಂಬಿಕೆ ಮತಾಂಧತೆ, ಅಸಹಿಷ್ಣುತೆ ಅಥವಾ ಅನ್ಯಾಯಗಳಿಗೆ ಸ್ಥಾನವಿಲ್ಲ. ಆದರೆ ಇಂದು ಬದಲಾದ ಸನ್ನಿವೇಶದಲ್ಲಿ ಲಕ್ಷಾಂತರ ಸಹ ನಾಗರಿಕರು ಪ್ರತಿದಿನ ತಾರತಮ್ಯ, ಅಸಹಿಷ್ಣುತೆ ಎದುರಿಸುತ್ತಿದ್ದಾರೆ ಎಂದು ಅವರು ಹೇಳಿದರು.

ಸ್ವಾತಂತ್ರ್ಯದ ರಕ್ಷಣೆಗಾಗಿ ಜನರು ಅನ್ಯಾಯ, ಅಸಹಿಷ್ಣುತೆ ಮತ್ತು ತಾರತಮ್ಯದ ವಿರುದ್ಧ ನಿಲ್ಲಬೇಕು ಎಂದು ಅವರು ಒತ್ತಿ ಹೇಳಿದರು.

ಸ್ವಾತಂತ್ರ್ಯ ಅನೇಕ ಹಿರಿಯರ ತ್ಯಾಗ, ಬಲಿದಾನದ ಫಲವಾಗಿದೆ. ಸಹೋದರತ್ವ, ಶಾಂತಿ ಮತ್ತು ಸಮಾನತೆಯ ಮೌಲ್ಯಗಳ ರಕ್ಷಣೆಗೆ ಪ್ರತಿಯೊಬ್ಬ ನಾಗರಿಕರೂ ಕೈ ಜೋಡಿಸಬೇಕು ಎಂದು ಸೋನಿಯಾ ಕರೆ ನೀಡಿದರು.

ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ಮುಖಂಡರು ಮಾಡಿದ ಮನವಿಯನ್ನು ರಾಹುಲ್ ಗಾಂಧಿ ತಿರಸ್ಕರಿಸಿದ ನಂತರ ಸೋನಿಯಾ ಗಾಂಧಿ ಶನಿವಾರ ಹಂಗಾಮಿ ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ಕಳೆದ ಲೋಕಸಭಾ ಚುನಾವಣೆಯ ಸೋಲಿನ ನಂತರ ರಾಹುಲ್ ಗಾಂಧಿ ಹುದ್ದೆಯಿಂದ ಕೆಳಗಿಳಿಯಲು ನಿರ್ಧರಿಸಿದ್ದರು. ಕಾಂಗ್ರೆಸ್ ಕೇವಲ 52 ಲೋಕಸಭಾ ಸ್ಥಾನ ಪಡೆಯುವಲ್ಲಿ ಮಾತ್ರ ಯಶಸ್ವಿಯಾಗಿದೆ.

SCROLL FOR NEXT