ದೇಶ

ಎಎಪಿ ತೊರೆದು ಬಿಜೆಪಿ ಸೇರಿದ ದೆಹಲಿ ಮಾಜಿ ಸಚಿವ ಕಪಿಲ್ ಮಿಶ್ರಾ

Raghavendra Adiga

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಇತರೆ ಪಕ್ಷಗಳಿಂದ ಬಿಜೆಪಿಗೆ ವಲಸೆ ಹೋಗುವ ಪರಿಪಾಠ ಹೆಚ್ಚಾಗುತ್ತಿದೆ ಈಗ ದೆಹಲಿಗೂ ಈ ಚಾಳಿ ಅವರಿಸಿಕೊಂಡಿದ್ದು ಕರವಾಲ್ ನಗರದ ಮಾಜಿ ಎಎಪಿ ಶಾಸಕ ಕಪಿಲ್ ಮಿಶ್ರಾ ಶನಿವಾರ ಪಕ್ಷ ತೊರೆದು ಬಿಜೆಪಿ ಸೇರಿದ್ದಾರೆ

ಈ ಹಿಂದೆ ಸಾರ್ವತ್ರಿಕ ಚುನಾವಣೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಮತ ಹಾಕಬೇಕು ಎಂದು ಹೇಳಿ ನಾಯಕರ ಕೋಪಕ್ಕೆ ಕಾರಣವಾಗಿದ್ದ ಅವರು, ದೆಹಲಿ ಬಿಜೆಪಿ ಮುಖ್ಯಸ್ಥ ಮನೋಜ್ ತಿವಾರಿ ಮತ್ತು ಪಕ್ಷದ ಮುಖಂಡ ವಿಜಯ್ ಗೋಯೆಲ್ ಅವರ ಸಮ್ಮುಖದಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಕೇಸರಿ ಪಕ್ಷಕ್ಕೆ ಸೇರಿದರು.

ಇದಲ್ಲದೆ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷದ ಮಹಿಳಾ ವಿಭಾಗದ ಮುಖ್ಯಸ್ಥೆ ರಿಚಾ ಪಾಂಡೆ ಸಹ ಕಮಲ ಪಾಳಯ ಸೇರಿದ್ದಾರೆ."ನಾನು ಕಪಿಲ್ ಮಿಶ್ರಾ ಮತ್ತು ರಿಚಾ ಪಾಂಡೆ ಅವರನ್ನು ಬಿಜೆಪಿಗೆ ಸ್ವಾಗತಿಸುತ್ತೇನೆ ಮತ್ತು ಅವರು ಪ್ರಧಾನಿ ನರೇಂದ್ರ ಮೋದಿಯವರ ನೀತಿಗಳು ಮತ್ತು ದೀನ್ ದಯಾಳ್ ಉಪಾಧ್ಯಾಯ ಮತ್ತು ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ತತ್ವವನ್ನು ಅನುಸರಿಸಿ ದೆಹಲಿಗೆ ಸೇವೆ ಸಲ್ಲಿಸುತ್ತಾರೆ ಎಂದು ನಾನು ಭಾವಿಸುತ್ತೇನೆ" ಎಂದು ತಿವಾರಿ ಹೇಳಿದರು.

ದೆಹಲಿ ವಿಧಾನಸಭಾ ಸ್ಪೀಕರ್ ರಾಮ್ ನಿವಾಸ್ ಗೋಯೆಲ್ ಅವರು ಈ ತಿಂಗಳ ಆರಂಭದಲ್ಲಿ ಮಿಶ್ರಾ ಅವರನ್ನು ಪಕ್ಷಾಂತರ ವಿರೋಧಿ ಕಾನೂನಿನಡಿಯಲ್ಲಿ ಅನರ್ಹಗೊಳಿಸಿದ್ದರು.ಕರವಾಲ್ ಕ್ಷೇತ್ರದಿಂದ ಆಯ್ಕೆಯಾಗಿದ್ದ ಶಾಸಕ ಮಿಶ್ರಾ ತಮ್ಮ ಅನರ್ಹತೆಯನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.
 

SCROLL FOR NEXT