ದೇಶ

ರೈಲ್ವೆ ಖಾಸಗೀಕರಣ .. ಮೊದಲ ಪ್ರಯತ್ನ ಆರಂಭ...!

Lingaraj Badiger

ನವದೆಹಲಿ: ಭಾರತೀಯ ರೈಲ್ವೆಯನ್ನು ಖಾಸಗೀಕರಣಗೊಳಿಸುವ ಸಂಬಂಧ ಮೊದಲ ಪ್ರಯತ್ನಗಳು ಗೋಚರಿಸುತ್ತಿವೆ. 

ದೆಹಲಿ-ಲಖನೌ ಮತ್ತು ಅಹಮದಾಬಾದ್-ಮುಂಬೈ ನಡುವಿನ ಸೆಂಟ್ರಲ್ ತೇಜಸ್ ಎಕ್ಸ್‌ಪ್ರೆಸ್ ರೈಲುಗಳನ್ನು ಓಡಿಸುವ, ನಿರ್ವಹಿಸುವ ಹೊಣೆಯನ್ನು ಪ್ರಾಯೋಗಿಕವಾಗಿ ತನ್ನ  ಅಂಗ ಸಂಸ್ಥೆ ಐಆರ್‌ಸಿಟಿಸಿಗೆ ಹಸ್ತಾಂತರಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ. 

ಈ ರೈಲುಗಳಲ್ಲಿ ಪ್ರಯಾಣ ದರಗಳನ್ನು ನಿಗದಿಪಡಿಸುವ ಹೊಣೆಯನ್ನು ಈ ಸಂಸ್ಥೆಗೆ ರೈಲ್ವೆ ಮಂಡಳಿ ಬಿಟ್ಟುಕೊಟ್ಟಿದೆ. ರೈಲ್ವೆ ಖಾಸಗೀಕರಣಗೊಳಿಸುವ ನಿಟ್ಟಿನಲ್ಲಿ ಇದು ಪ್ರಯೋಗ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಈ ಎರಡು ರೈಲುಗಳನ್ನು ಮೂರು ವರ್ಷಗಳ ಅವಧಿಗೆ ಐಆರ್‌ಸಿಟಿಸಿಗೆ ಹಸ್ತಾಂತರಿಸಲಾಗಿದೆ  ಎಂದು ರೈಲ್ವೆ ಮಂಡಳಿ ಸಿದ್ಧಪಡಿಸಿದ ವಿವರಣಾತ್ಮಕ ದಾಖಲೆಯಲ್ಲಿ ವಿವರಿಸಲಾಗಿದೆ.  
ಅಂತರರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ಪ್ರಯಾಣಿಕರಿಗೆ ಉತ್ತಮ ಸೇವೆಯನ್ನು ಒದಗಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ರೈಲುಗಳಲ್ಲಿ ಯಾವುದೇ  ರೀತಿಯ ರಿಯಾಯಿತಿ ಮತ್ತು ಪಾಸುಗಳಿಗೆ ಅವಕಾಶ  ಇರುವುದಿಲ್ಲ ಎಂದು ಅದು ಸ್ಪಷ್ಟಪಡಿಸಿದೆ. ಈ ಎರಡು ತೇಜಸ್ ಎಕ್ಸ್‌ಪ್ರೆಸ್ ರೈಲುಗಳಲ್ಲಿ ಟಿಕೆಟ್ ತಪಾಸಣೆಯನ್ನೂ ರೈಲ್ವೆ ಸಿಬ್ಬಂದಿ ಕೈಗೊಳ್ಳುವುದಿಲ್ಲ ಎಂದು ರೈಲ್ವೆ ಮಂಡಳಿ ಬಹಿರಂಗಪಡಿಸಿದೆ.

ರೈಲುಗಳನ್ನು ತಮ್ಮ ಸಿಬ್ಬಂದಿಯೇ ಓಡಿಸಲಿದ್ದಾರೆ. ಲೋಕೊ ಪೈಲೆಟ್ ಗಳು,  ಗಾರ್ಡ್‌ಗಳು ಮತ್ತು ಸ್ಟೇಷನ್ ಮಾಸ್ಟರ್ ಗಳು ಎಲ್ಲರೂ ರೈಲ್ವೆ ಇಲಾಖೆಗೆ ಸೇರಿದವರಾಗಿರುತ್ತಾರೆ.

ಶತಾಬ್ದಿ ರೈಲುಗಳ ಮಾದರಿ ಸೇವೆಗಳು ಈ ರೈಲುಗಳಲ್ಲಿರಲಿದೆ ಎಂದು ಮಂಡಳಿ ವಿವರಿಸಿದೆ. 
ಈ ಎರಡೂ ರೈಲಿನ ಒಳಗೆ ಮತ್ತು ಹೊರಗೆ ಜಾಹೀರಾತು ನೀಡಲು ಐಆರ್‌ಸಿಟಿಸಿಗೆ ಅಧಿಕಾರ ಕಲ್ಪಿಸಲಾಗಿದೆ.  ಸುರಕ್ಷತೆಗೆ ಧಕ್ಕೆಯಾಗದಂತೆ ಬೋಗಿಗಳಲ್ಲಿ ಬದಲಾವಣೆ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಒಂದೊಮ್ಮೆ ಈ ರೈಲುಗಳಲ್ಲಿ ಅಪಘಾತ ಸಂಭವಿಸಿದರೆ.  ಪರಿಹಾರ ಮತ್ತು ಚಿಕಿತ್ಸೆಗೆ ಪ್ರಸ್ತುತ ನಿಯಮಗಳು ಅನ್ವಯಿಸುತ್ತವೆ ಎಂದು ರೈಲ್ವೆ  ಇಲಾಖೆ  ಸ್ಪಷ್ಟಪಡಿಸಿದ್ದಾರೆ.

SCROLL FOR NEXT