ದೇಶ

ಐಎನ್ ಎಕ್ಸ್ ಮಾಧ್ಯಮ ಹಗರಣ: ಮುಚ್ಚಿದ ಲಕೋಟೆಯಲ್ಲಿ ಸುಪ್ರೀಂಗೆ ಇಡಿ ದಾಖಲೆ ಸಲ್ಲಿಕೆ

Nagaraja AB

ನವದೆಹಲಿ: ಐಎನ್ ಎಕ್ಸ್ ಮಾಧ್ಯಮ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಅವರ ವಿಚಾರಣೆಗೆ ಸಂಬಂಧಿಸಿದ ದಾಖಲೆಗಳನ್ನು ಅಧಿಕೃತ ಮುದ್ರೆಯೊಂದಿಗೆ ಮುಚ್ಚಿದ ಲಕೋಟೆಯಲ್ಲಿ ಸುಪ್ರೀಂಕೋರ್ಟ್ ಗೆ ಜಾರಿ ನಿರ್ದೇಶನಾಲಯ ಇಂದು ಸಲ್ಲಿಸಿದೆ 

ನ್ಯಾಯಾಧೀಶರಾದ ಆರ್ ಭಾನುಮತಿ ಹಾಗೂ ಎಎಸ್ ಬೊಪ್ಪಣ್ಣ ಅವರನ್ನೊಳಗೊಂಡ ಪೀಠದ ಮುಂದೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಈ ದಾಖಲೆಗಳನ್ನು ಸಲ್ಲಿಸಿದ್ದಾರೆ.

ಐಎನ್ ಎಕ್ಸ್ ಮಾಧ್ಯಮ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿದಂಬರಂ ಅವರಿಗೆ ಬಂಧನದ ಭೀತಿಯಿಂದ ಗುರುವಾರ ಬಚಾವ್ ಮಾಡಿದ್ದ ಸುಪ್ರೀಂಕೋರ್ಟ್, ಮುಚ್ಚಿದ ಲಕೋಟೆಯಲ್ಲಿ ಅಧಿಕೃತ ಮುದ್ರೆಯೊಂದಿಗೆ ದಾಖಲೆಗಳನ್ನು ಸಲ್ಲಿಸುವಂತೆ ಜಾರಿ ನಿರ್ದೇಶನಾಲಯಕ್ಕೆ ನಿರ್ದೇಶನ ನೀಡಿತ್ತು.

ದಾಖಲೆಗಳನ್ನು ಪರಿಶೀಲಿಸಬೇಕೆ ಅಥವಾ ಬೇಡವೇ ಎಂಬುದು  ನ್ಯಾಯಾಲಯ ತೆಗೆದುಕೊಳ್ಳುವ ನಿರ್ಧಾರವನ್ನು ಅವಲಂಬಿಸಿರುತ್ತದೆ "ಎಂದು ನ್ಯಾಯಪೀಠ ಹೇಳಿಕೆ ನೀಡಿತ್ತು. 

ಈ ಪ್ರಕರಣದಲ್ಲಿ ಪಿ. ಚಿದಂಬರಂ ಸಲ್ಲಿಸಿದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ದೆಹಲಿ ಹೈಕೋರ್ಟ್ ಆಗಸ್ಟ್ 20 ರಂದು ವಜಾಗೊಳಿಸಿತ್ತು. ಇದರ ವಿರುದ್ಧ ಪಿ. ಚಿದಂಬರಂ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು. ಸೆಪ್ಟೆಂಬರ್ 5 ರಂದು ತನ್ನ ತೀರ್ಪನ್ನು ಪ್ರಕಟಿಸುವುದಾಗಿ ಸುಪ್ರೀಂಕೋರ್ಟ್ ಹೇಳಿದೆ. 

SCROLL FOR NEXT