ಹೈದ್ರಾಬಾದ್: ಪಶು ವೈದ್ಯೆ ಅತ್ಯಾಚಾರ ಪ್ರಕರಣ ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿರುವಂತೆ ಸುರಕ್ಷತಾ ಕ್ರಮವಾಗಿ ಸಾರಿಗೆ ಸಂಸ್ಥೆ ಮಹಿಳಾ ಸಿಬ್ಬಂದಿಯನ್ನು ರಾತ್ರಿ ಪಾಳಿಯಲ್ಲಿ ಕೆಲಸಕ್ಕೆ ನಿಯೋಜಿಸಬಾರದೆಂಬ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದೆ.
ಪಶು ವೈದ್ಯೆ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯಿಸಿರುವ ಕೆಸಿಆರ್, ಇದೊಂದು ಅಮಾನವೀಯ ಹೇಯಕೃತ್ಯವಾಗಿದೆ. ಮಹಿಳಾ ವೈದ್ಯೆಯನ್ನು ಕೊಲೆ ಮಾಡಿರುವ ಹಂತಕರು ಮನುಷ್ಯರಾ? ಅವರು ಪ್ರಾಣಿಗಳು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇತ್ತೀಚಿಗೆ 55 ದಿನಗಳ ಮುಷ್ಕರವನ್ನು ಅಂತ್ಯಗೊಳಿಸಿದ ಸಾರಿಗೆ ಸಂಸ್ಥೆ ಮಹಿಳಾ ನೌಕರರನ್ನು ತಮ್ಮ ನಿವಾಸದ ಬಳಿ ಭೇಟಿ ಮಾಡಿ ಮಾತನಾಡಿದ ಮುಖ್ಯಮಂತ್ರಿ, ಪಶು ವೈದ್ಯೆ ಅತ್ಯಾಚಾರ ಹಾಗೂ ಕೊಲೆಯ ಹಿನ್ನೆಲೆಯಲ್ಲಿ ಸಾರಿಗೆ ಸಂಸ್ಥೆ ಮಹಿಳಾ ಸಿಬ್ಬಂದಿಯನ್ನು ರಾತ್ರಿ ಪಾಳಿಯಲ್ಲಿ ಕೆಲಸಕ್ಕೆ ನಿಯೋಜಿಸಬಾರದು ಎಂದರು.
ಐಟಿ ವಲಯ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿನ ಮಹಿಳಾ ಉದ್ಯೋಗಿಗಳು ಮಹಿಳೆಯರಿಗೆ ರಾತ್ರಿ ಪಾಳಿಗಳನ್ನು ದೂರವಿಡುವುದು ಹಿಂಜರಿತ ಎಂದು ಹೇಳಿದ್ದು, ಇಂತಹ ಕ್ರಮಗಳು ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಜಾಗವನ್ನು ಮತ್ತಷ್ಟು ಕುಗ್ಗಿಸುತ್ತದೆ ಎಂದು ವಾದಿಸುತ್ತಿದ್ದಾರೆ.