ದೇಶ

ವಲಯಾರ್ ಸಹೋದರಿಯರ ಸಾವು ಪ್ರಕರಣ: ಖುಲಾಸೆಗೊಂಡಿದ್ದ ವ್ಯಕ್ತಿ ಮೇಲೆ ಹಲ್ಲೆ, ಆಸ್ಪತ್ರೆಗೆ ದಾಖಲು

Lingaraj Badiger

ಪಲಕ್ಕಾಡ್: ಕೇರಳದ ಪಾಲಕ್ಕಾಡ್ ಜಿಲ್ಲೆಯ ವಲಯಾರ್‌ನಲ್ಲಿ ಅಪ್ರಾಪ್ತ ದಲಿತ ಸೋದರಿಯರ ಸಾವಿನ ಪ್ರಕರಣದಲ್ಲಿ ಖುಲಾಸೆಗೊಂಡಿದ್ದ  ಆರೋಪಿ ಮೇಲೆ ಸ್ಥಳೀಯರು ಹಲ್ಲೆ ನಡೆಸಿದ ಘಟನೆ ಶನಿವಾರ ನಡೆದಿದೆ.

ಆರೋಪಿ ಕುಟ್ಟಿ ಮಧು ಮೇಲೆ ಸ್ಥಳೀಯರು ದಾಳಿ ನಡೆಸಿದ್ದು, ಘಟನೆಯಲ್ಲಿ ಗಾಯಗೊಂಡ ಆರೋಪಿಯನ್ನು ಪಾಲಕ್ಕಾಡ್‌ನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಸೋದರಿಯರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧು ಹಾಗೂ ಇತರೆ ನಾಲ್ಕೈದು ಜನರ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ರೊಚ್ಚಿಗೆದ್ದ ಜನರು ಆರೋಪಿ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಸಂಬಂಧ ಮೂವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ತಂಡ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಆರೋಪಿಯಿಂದ ಹೇಳಿಕೆಯನ್ನು ದಾಖಲಿಸಿಕೊಂಡಿದೆ. 

2017ರ ಜನವರಿಯಲ್ಲಿ ಪಾಲಕ್ಕಾಡ್‌ನ ವಲಯಾರ್‌ ಪ್ರದೇಶದ ಶಿಥಿಲಗೊಂಡ ಮನೆಯೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ 13 ವರ್ಷದ ಬಾಲಕಿಯ ಮೃತದೇಹ ಪತ್ತೆಯಾಗಿತ್ತು. ಸಾವಿಗೂ ಮುನ್ನ ಬಾಲಕಿ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದು, ಮರಣೋತ್ತರ ಪರೀಕ್ಷೆಯಿಂದ ದೃಢಪಟ್ಟಿತ್ತು. ಬಾಲಕಿ ಮೃತದೇಹ ಪತ್ತೆಯಾದ ದಿನದಂದು ಮನೆಯಿಂದ ಇಬ್ಬರು ಓಡಿ ಹೋಗಿದ್ದನ್ನು ನೋಡಿರುವುದಾಗಿ 9 ವರ್ಷದ ಸೋದರಿ ತಿಳಿಸಿದ್ದಳು. 

ಅದಾದ ಎರಡು ತಿಂಗಳ ಬಳಿಕ ಅದೇ ಸ್ಥಳದಲ್ಲಿ ಅದೇ ಮಾದರಿಯಲ್ಲಿ ಸೋದರಿಯ ಮೃತದೇಹ ಪತ್ತೆಯಾಗಿತ್ತು. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿರುವ ಕುರಿತು ಹೇಳಲಾಗಿತ್ತು. ಆ ಪ್ರಕರಣ ತೀವ್ರ ಚರ್ಚೆಗೆ ಗ್ರಾಸವಾದ ಬೆನ್ನಲ್ಲೇ ಸಂತ್ರಸ್ತೆಯರ ಮನೆಗೆ ಬಂದು ಹೋಗುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಲಾಗಿತ್ತು. 

ಆದರೆ ಸ್ಥಳೀಯ ನ್ಯಾಯಾಲಯವು ಮೂವರು ಆರೋಪಿಗಳನ್ನು ಖುಲಾಸೆಗೊಳಿಸಿ ಆದೇಶ ಹೊರಡಿಸಿತ್ತು. ಆದರೆ ರಾಜ್ಯ ಸರ್ಕಾರವು ಇದನ್ನು ಪ್ರಶ್ನಿಸಿ ಕೇರಳ ಹೈಕೋರ್ಟ್‌ ಮೊರೆ ಹೋಗಿದೆ.

SCROLL FOR NEXT