ನವದೆಹಲಿ: ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಪ್ರತಿಭಟನೆ ಸರ್ಕಾರದ ಮಧ್ಯಪ್ರವೇಶವಾದ ನಂತರವೂ ಕೊನೆಯಾಗದ ಹಿನ್ನೆಲೆಯಲ್ಲಿ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಉನ್ನತ ಶಿಕ್ಷಣ ಕಾರ್ಯದರ್ಶಿ ಆರ್ ಸುಬ್ರಹ್ಮಣ್ಯಂ ಅವರನ್ನು ವರ್ಗಾವಣೆ ಮಾಡಲಾಗಿದೆ.
ಕೇಂದ್ರ ಸಂಪುಟದ ನೇಮಕಾತಿ ಸಮಿತಿ ಹೊರಡಿಸಿರುವ ಆದೇಶದ ಪ್ರಕಾರ ಸುಬ್ರಹ್ಮಣ್ಯಂ ಅವರನ್ನು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.
ಆರ್ ಸುಬ್ರಹ್ಮಣ್ಯಂ ಅವರ ಸ್ಥಾನಕ್ಕೆ ಅಮಿತ್ ಖಾರೆಯವರು ಬಂದಿದ್ದಾರೆ. ಮೂಲಗಳಿಂದ ತಿಳಿದುಬಂದಿರುವ ಮಾಹಿತಿ ಪ್ರಕಾರ, ಸುಬ್ರಹ್ಮಣ್ಯಂ ಅವರ ಆದೇಶದಂತೆ ಸಚಿವಾಲಯ ಜೆಎನ್ ಯು ವಿದ್ಯಾರ್ಥಿ ಒಕ್ಕೂಟದ ಪ್ರತಿನಿಧಿಗಳನ್ನು ಕರೆದು ಈ ವಾರದ ಆರಂಭದಲ್ಲಿ ಮಾತುಕತೆ ನಡೆಸಿತ್ತು. ಹಾಸ್ಟೆಲ್ ಶುಲ್ಕ ಏರಿಕೆ ಸೇರಿದಂತೆ ವಿವಿಧ ವಿಷಯಗಳನ್ನಿಟ್ಟುಕೊಂಡು ವಿದ್ಯಾರ್ಥಿ ಸಂಘಟನೆ ಕಳೆದ ಅಕ್ಟೋಬರ್ ನಿಂದ ಪ್ರತಿಭಟನೆ ನಡೆಸುತ್ತಿದೆ.