ಪುಣೆ: ಮಹಾರಾಷ್ಟ್ರ ಸರ್ಕಾರದಿಂದ ತಮಗೆ ನೀಡಲಾಗಿರುವ ಭದ್ರತಾ ಸೌಲಭ್ಯವನ್ನು ಹಿಂಪಡೆಯುವಂತೆ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಒತ್ತಾಯಿಸಿದ್ದಾರೆ.
ಈ ಸಂಬಂಧ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ದವ್ ಠಾಕ್ರೆ ಅವರಿಗೆ ಅಣ್ಣಾ ಹಜಾರೆ ಪತ್ರ ಬರೆದಿದ್ದು, ಸಾರ್ವಜನಿಕ ಹಣವನ್ನು ವ್ಯರ್ಥ್ಯ ಮಾಡಿ ಭದ್ರತಾ ಸೌಲಭ್ಯ ನೀಡುವುದು ಬೇಡ ಎಂದಿದ್ದಾರೆ.
ಈ ಹಿಂದೆ ಅನೇಕ ಜನರು ತಮನ್ನು ಬೆದರಿಸಿದ್ದಾರೆ. ಆದರೆ, ಅವರನ್ನು ಯಾವಾಗಲೂ ನಿರ್ಲಕ್ಷಿಸಿರುವುದಾಗಿ ಹೇಳಿರುವ ಅಣ್ಣಾ ಹಜಾರೆ, ತಮಗೆ ನೀಡಲಾಗಿರುವ ಭದ್ರತಾ ಸೌಲಭ್ಯವನ್ನು ಹಿಂಪಡೆಯುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದೇನೆ. ಆದರೆ, ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಈ ಮಧ್ಯೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೊಲ್ಕರ್ ಸೇರಿದಂತೆ ಕೆಲ ಗಣ್ಯ ವ್ಯಕ್ತಿಗಳಿಗೆ ನೀಡಿದ ಭದ್ರತಾ ಸೌಲಭ್ಯವನ್ನು ಸರ್ಕಾರ ಹಿಂಪಡೆದಿದ್ದು, ತಮಗೂ ನೀಡಲಾಗಿರುವ ಭದ್ರತಾ ಸೌಲಭ್ಯ ಹಿಂಪಡೆಯುವಂತೆ ಒತ್ತಾಯಿಸಿ ಅಣ್ಣಾ ಹಜಾರೆ ಸರ್ಕಾರಕ್ಕೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.