ದೇಶ

ಸೇನೆ ಮತ್ತಷ್ಟು ಬಲಿಷ್ಠವಾಗಿದೆ, ನೂತನ ಮುಖ್ಯಸ್ಥರ ನೇತೃತ್ವದಲ್ಲಿ ಉತ್ತುಂಗಕ್ಕೇರಲಿ: ಜ.ಬಿಪಿನ್ ರಾವತ್ 

Sumana Upadhyaya

ನವದೆಹಲಿ: ಭಾರತೀಯ ಸೇನೆಯಲ್ಲಿ ಮೂರು ವರ್ಷಗಳ ಕಾಲ ಮುಖ್ಯಸ್ಥರಾಗಿದ್ದ ವೇಳೆ ಸಹಕರಿಸಿದ ಎಲ್ಲಾ ಸಿಬ್ಬಂದಿ ವರ್ಗ ಮತ್ತು ಅವರ ಕುಟುಂಬದವರಿಗೆ ಜನರಲ್ ಬಿಪಿನ್ ರಾವತ್ ಧನ್ಯವಾದ ಹೇಳಿದ್ದಾರೆ. ಅವರು ಭಾರತೀಯ ಸೇನಾ ಮುಖ್ಯಸ್ಥ ಹುದ್ದೆಯಿಂದ ಮಂಗಳವಾರ ನಿರ್ಗಮಿಸಿದ್ದಾರೆ. 


ದೆಹಲಿಯಲ್ಲಿ ನಿರ್ಗಮಿತ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರಿಗೆ ಇಂದು ಸಕಲ ಸರ್ಕಾರಿ ಗೌರವಗಳ ಮೂಲಕ ವಿದಾಯ ಕೋರಲಾಯಿತು. ಈ ಸಂದರ್ಭದಲ್ಲಿ ಮಾತನಾಡಿರುವ ಅವರು, ಭಾರತೀಯ ಸೇನಾ ಮುಖ್ಯಸ್ಥ ಹುದ್ದೆಯಿಂದ ನಿರ್ಗಮಿಸುತ್ತಿರುವ ಸಂದರ್ಭದಲ್ಲಿ ಸೈನಿಕರಿಗೆ ನನ್ನ ಕೃತಜ್ಞತೆಗಳನ್ನು ಹೇಳಲು ಇಚ್ಛಿಸುತ್ತೇನೆ. ಸವಾಲಿನ, ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಸೈನಿಕರು ನನ್ನ ಜೊತೆ ನಿಂತು ದೇಶಸೇವೆ ಮಾಡಿರುವುದಕ್ಕೆ ನಾನು ಅಭಾರಿ. ಭಾರತೀಯ ಸೇನೆಯ 28ನೇ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳುತ್ತಿರುವ ಮನೋಜ್ ನರವಾನೆಯವರಿಗೆ ಶುಭಕಾಮನೆಗಳು, ಅವರ ಮುಂದಿನ ಕಾರ್ಯ ಯಶಸ್ವಿಯಾಗಲೆಂದು ಹಾರೈಸುತ್ತೇನೆ, ಅವರ ನೇತೃತ್ವದಲ್ಲಿ ಭಾರತೀಯ ಸೇನೆ ಮುಂದಿನ ದಿನಗಳಲ್ಲಿ ಇನ್ನಷ್ಟು ಉಜ್ವಲವಾಗಿ ಬೆಳಗಲಿ ಎಂದು ಆಶಿಸಿದರು. 


ದೇಶದ ಭದ್ರತೆ ವಿಷಯದಲ್ಲಿ ಇನ್ನಷ್ಟು ಸವಾಲುಗಳನ್ನು ಎದುರಿಸಲು ಸೇನೆ ಸಜ್ಜಾಗಿದೆಯೇ ಎಂದು ಕೇಳಿದಾಗ, ಹೌದು ದೇಶ ಇನ್ನಷ್ಟು ಉತ್ತಮವಾಗಿ ಸಜ್ಜಾಗಿದೆ ಎಂದರು.


ದೇಶದ ಮೂರೂ ಪಡೆಗಳ ರಕ್ಷಣಾ ಸಿಬ್ಬಂದಿಗಳ ಮುಖ್ಯಸ್ಥರಾಗಿ ಜನರಲ್ ಬಿಪಿನ್ ರಾವತ್ ನಿನ್ನೆ ನೇಮಕಗೊಂಡಿದ್ದು ದೇಶದ ಮಿಲಿಟರಿ ಶಕ್ತಿಯನ್ನು ಹೆಚ್ಚಿಸಲು ಮುಂದಿನ ದಿನಗಳಲ್ಲಿ ಅವರು ಕಾರ್ಯೋನ್ಮುಖವಾಗಲಿದ್ದಾರೆ.


ಜನರಲ್ ಬಿಪಿನ್ ರಾವತ್ ಅವರು ಮೂರು ವರ್ಷಗಳ ಕಾಲ ಭಾರತೀಯ ಭೂ ಸೇನೆಯ ಮುಖ್ಯಸ್ಥರಾಗಿದ್ದರು.

SCROLL FOR NEXT