ನವದೆಹಲಿ: ನೋಟು ನಿಷೇಧ ಬಳಿಕ ದೇಶದಲ್ಲಿ 45 ವರ್ಷಗಳಲ್ಲೇ ಅತೀ ಹೆಚ್ಚಿನ ಪ್ರಮಾಣದ ನಿರುದ್ಯೋಗ ಸೃಷ್ಟಿಯಾಗಿದೆ ಎಂಬ ವರದಿಯನ್ನು ಪರಿಶೀಲನೆ ಮಾಡಿಲ್ಲ ಎಂದು ನೀತಿ ಆಯೋಗ ಹೇಳಿದೆ.
ಈ ಬಗ್ಗೆ ಮಾಹಿತಿ ನೀಡಿದ ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಅವರು, ರಾಷ್ಟ್ರೀಯ ಮಾದರಿ ಸಮೀಕ್ಷಾ ಕಚೇರಿ ವರದಿಯನ್ನು ಪರಿಶೀಲನೆ ಮಾಡಿಲ್ಲ. ಅಲ್ಲದೆ ಈ ಸಮೀಕ್ಷೆಯ ಕುರಿತು ತಮಗೆ ಯಾವುದೇ ರೀತಿಯ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ.
ಇನ್ನು ರಾಷ್ಟ್ರೀಯ ಮಾದರಿ ಸಮೀಕ್ಷಾ ಕಚೇರಿ ವರದಿಯಿಂದಾಗಿ ಹಾಲಿ ಸರ್ಕಾರ ತನ್ನ ಕೊನೆಯ ಬಜೆಟ್ ಮಂಡನೆಗೂ ಮುನ್ನವೇ ತೀವ್ರ ಮುಜುಗರವನ್ನು ಅನುಭವಿಸಿದೆ. ಅಂತೆಯೇ ಇದೇ ವಿಚಾರವಾಗಿ ವಿಪಕ್ಷಗಳೂ ಕೂಡ ಕೇಂದ್ರದ ಎನ್ ಡಿಎ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿವೆ.
2016ರಲ್ಲಿ ಪ್ರಧಾನಿ ಮೋದಿ ಅವರು 500 ಹಾಗೂ 1000 ರುಪಾಯಿ ಮುಖ ಬೆಲೆಯ ನೋಟುಗಳನ್ನು ರದ್ದು ಮಾಡಿದ ನಂತರ ನಿರುದ್ಯೋಗ ವಿಚಾರಕ್ಕೆ ಸಂಬಂಧಿಸಿ ಸರ್ಕಾರಿ ಸ್ವಾಮ್ಯದ ಸಂಸ್ಥೆ ನಡೆಸಿದ ಮೊದಲ ಸಮೀಕ್ಷೆ ಇದಾಗಿದೆ.
ಈ ವರದಿಯನ್ನು ಕಳೆದ ತಿಂಗಳೆ ಸಿದ್ದಪಡಿಸಲಾಗಿದ್ದು, ವರದಿಯನ್ನು ಸಾರ್ವಜನಿಕಪಡಿಸಿಲ್ಲ ಎಂಬ ಕಾರಣಕ್ಕೆ ಕಳೆದ ವಾರ ರಾಷ್ಟ್ರೀಯ ಸಂಖ್ಯಾಶಾಸ್ತ್ರ ಆಯೋಗದ ಇಬ್ಬರು ಸ್ವತಂತ್ರ ಅಧಿಕಾರಿಗಳು ರಾಜೀನಾಮೆ ನೀಡಿದ್ದರು. ಆದರೂ ಕೂಡ ಈ ವರದಿ ಇನ್ನು ಬಹಿರಂಗವಾಗಿಲ್ಲ.
1972-73ರಲ್ಲಿ ನಿರುದ್ಯೋಗ ದರ ಹೆಚ್ಚಿತ್ತು ಆದಾದ ಬಳಿಕ ಈಗಲೇ ಇಷ್ಟು ಪ್ರಮಾಣದ ಸಂಖ್ಯೆ ಹೆಚ್ಚಿದೆ. 2011-12ರಲ್ಲಿ ಯುಪಿಎ ಸರ್ಕಾರದ ಅವಧಿಯಲ್ಲಿ ನಿರುದ್ಯೋಗದ ಸಂಖ್ಯೆ ಕೇವಲ 2.2ರಷ್ಟು ಮಾತ್ರ ಇತ್ತು ಎನ್ನಲಾಗಿದೆ.
ಕಳೆದ ವರ್ಷಕ್ಕೆ ಹೋಲಿಸಿಕೊಂಡರೆ ಹಾಗೂ ಒಟ್ಟಾರೆ ಜನಸಂಖ್ಯೆಗೆ ಹೋಲಿಸಿದರೆ, ಯುವಕರಲ್ಲಿ ನಿರುದ್ಯೋಗ ಸಂಖ್ಯೆ ಹೆಚ್ಚಾಗಿದೆ ಎಂದು ಸಮೀಕ್ಷೆ ತಿಳಿಸಿತ್ತು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos