ನವದೆಹಲಿ: ಹಿಂದಿ, ಹಿಂದು, ಹಿಂದುತ್ವ ಕುರಿತಾಗಿ ಕಾಂಗ್ರೆಸ್ ನಾಯಕ ಶಶಿ ತರೂರ್ ಮಾಡಿರುವ ಟ್ವೀಟ್ ನಿಂದಾಗಿ ಹಿಂದೂ ಧರ್ಮಕ್ಕೆ ಅವಮಾನವಾಗಿದೆ ಎಂದು ಬಿಜೆಪಿ ಆರೋಪಿಸಿದೆ.
ದೇಶದ ಅತ್ಯಂತ ಪುರಾತನ ಪಕ್ಷವಾಗಿರುವ ಕಾಂಗ್ರೆಸ್, ದೇಶದ ಸಂಸ್ಕೃತಿ ಮತ್ತು ಪರಂಪರೆಯನ್ನು ಕೀಳಾಗಿ ಕಾಣುವ ತನ್ನ ಪಿತೂರಿಯ ಭಾಗವಾಗಿ ಹಿಂದು ಧರ್ಮವನ್ನು ಅವಮಾನಿಸುತ್ತಿದೆ; ಇದರ ಪರಿಣಾಮ ಗಂಭೀರವಾಗುತ್ತದೆ ಎಂಬ ಎಚ್ಚರಿಕೆಯನ್ನು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ರವಾನಿಸಿದೆ.
"ಹಿಂದಿ, ಹಿಂದು, ಹಿಂದುತ್ವದ ಸಿದ್ಧಾಂತವು ದೇಶವನ್ನು ವಿಭಜಿಸುವಂತಿದೆ. ನಮಗೆ ಬೇಕಿರುವುದು ಏಕತೆ ಮತ್ತು ಏಕರೂಪತೆ' ಎಂದು ಶಶಿ ತರೂರ್ ಟ್ವೀಟ್ ಮಾಡಿದ್ದರು.
"ತರೂರ್ ಅವರ ಟ್ವೀಟ್ ತುಂಬ ಆಕ್ಷೇಪಾರ್ಹವಾಗಿದೆ, ನಾವು ಅವರ ಈ ಟೀಕೆಯನ್ನು ಕಾಂಗ್ರೆಸ್ ಪಕ್ಷದ ಟೀಕೆ ಎಂದೇ ಪರಿಗಣಿಸುತ್ತೇವೆ, ಏಕೆಂದರೆ ತರೂರ್ ಅವರು ರಾಹುಲ್ ಗಾಂಧಿ ಅವರ ಆಪ್ತರಾಗಿದ್ದಾರೆ. ಶಶಿ ತರೂರ್ ಹೇಳುವುದನ್ನೆಲ್ಲ ಕಾಂಗ್ರೆಸ್ ಯಾವಾಗಲೂ ಒಪ್ಪಿಕೊಂಡಿದೆ ಎಂದು ಬಿಜೆಪಿ ವಕ್ತಾರ ಸಂಬಿತ್ ಪತ್ರ ಕಿಡಿಕಾರಿದ್ದಾರೆ.