ನವದೆಹಲಿ: ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಕೇಂದ್ರದ ಎನ್ ಡಿಎ ಸರ್ಕಾರ ಮಂಡಿಸಿದ್ದ ಮಧ್ಯಂತರ ಬಜೆಟ್ ಗೆ ತಡೆ ನೀಡಬೇಕು ಎಂದು ಕೋರಿ ವಕೀಲರೊಬ್ಬರು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ.
ನಿನ್ನೆ ಕೇಂದ್ರ ವಿತ್ತ ಸಚಿವ ಪಿಯೂಶ್ ಗೋಯಲ್ ಮಂಡಿಸಿದ್ದ ಬಜೆಟ್ ನಲ್ಲಿ ಮಧ್ಯಮ ವರ್ಗಕ್ಕೆ ಮತ್ತು ಕೃಷಿ ಕ್ಷೇತ್ರಕ್ಕೆ ಸಾಕಷ್ಟು ಯೋಜನೆಗಳನ್ನು ಘೋಷಿಸಲಾಗಿತ್ತು. ಬಜೆಟ್ ನಲ್ಲಿ ಯಾವೆಲ್ಲಾ ಅಂಶಗಳು ಅಡಕವಾಗಿವೆ ಎಂದು ಮಾಧ್ಯಮಗಳು ತಲೆಕೆಡಿಸಿಕೊಳ್ಳುತ್ತಿರುವ ಹೊತ್ತಿನಲ್ಲೇ ಈ ಮಧ್ಯಂತರ ಬಜೆಟ್ ಗೆ ತಡೆ ನೀಡಬೇಕು ಎಂದು ವಕೀಲರೊಬ್ಬರು ಸುಪ್ರೀಂ ಕೋರ್ಟ್ ನಲ್ಲಿ ದಾವೆ ಹೂಡಿದ್ದಾರೆ.
ಹಿರಿಯ ವಕೀಲ ಮನೋಹರ ಲಾಲ್ ಶರ್ಮಾ ಎಂಬುವವರು ಈ ದೂರು ಸಲ್ಲಿಸಿದ್ದು, 'ಸಂವಿಧಾನದಲ್ಲಿ ಪೂರ್ಣಪ್ರಮಾಣದ ಬಜೆಟ್ ಮಂಡನೆಗೆ ಮಾತ್ರ ಅವಕಾಶವಿದ್ದು, ಇದಕ್ಕೆ ಧ್ವನಿಮತದ ಒಪ್ಪಿಗೆ ಪಡೆಯಬೇಕು. ಚುನಾವಣೆ ನಂತರ ಬಂದ ಸರ್ಕಾರ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲು ಅವಕಾಶವಿದೆ. ಆದರೆ ಹಣಕಾಸು ಸಚಿವ ಪಿಯೂಷ್ ಗೋಯಲ್ ಅವರ ಮಧ್ಯಂತರ ಬಜೆಟ್ ಮಂಡನೆ ಅಸಂವಿಧಾನಿಕವಾಗಿದ್ದು ಅದನ್ನು ವಜಾಗೊಳಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.
ಅಲ್ಲದೆ ಈಗ ಸೀಮಿತ ಅವಧಿಯ ಸರ್ಕಾರವಿದ್ದು ಕೆಲವೇ ತಿಂಗಳಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ. ಮುಂದಿನ ಸರ್ಕಾರವೇ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಬೇಕು ಎಂದು ಮನೋಹರ್ ಲಾಲ್ ಶರ್ಮಾ ಅರ್ಜಿಯಲ್ಲಿ ಕೇಳಿಕೊಂಡಿದ್ದಾರೆ.
ಸರ್ವೋಚ್ಛ ನ್ಯಾಯಾಲಯದಿಂದ ದಂಡಕ್ಕೆ ತುತ್ತಾಗಿದ್ದ ವಕೀಲರು
ಇನ್ನು ಈ ಹಿಂದೆ ಇದೇ ಮನೋಹರ್ ಲಾಲ್ ಶರ್ಮಾಗೆ ಸುಪ್ರೀಂಕೋರ್ಟ್ 50 ಸಾವಿರ ದಂಡ ವಿಧಿಸಿತ್ತು. ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಮತ್ತು ಆರ್ ಬಿಐ ನಡುವಿನ ವಿಚಾರಕ್ಕೆ ಸಂಬಂಧಿಸಿದಂತೆ ಪಿಐಎಲ್ ಸಲ್ಲಿಕೆ ಮಾಡಿ ಸುಪ್ರೀಂ ಕೋರ್ಟ್ ಆಕ್ರೋಶಕ್ಕೆ ತುತ್ತಾಗಿದ್ದರು. ಹೀಗಾಗಿ ಕಳೆದ ಡಿಸೆಂಬರ್ ನಲ್ಲಿ ಸುಪ್ರೀಂ ಕೋರ್ಟ್ ಶರ್ಮಾಗೆ 50 ಸಾವಿರ ರೂ ದಂಡ ವಿಧಿಸಿತ್ತು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos