ನಾಗಪುರ: ಮನೆಯನ್ನು ಸರಿಯಾಗಿ ನೋಡಿಕೊಳ್ಳದವರು ಇನ್ನೂ ದೇಶವನ್ನು ಚೆನ್ನಾಗಿ ನೋಡಿಕೊಳ್ತಾರಾ ಎಂದು ಕೇಂದ್ರ ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಹಾಗೂ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ವಿದ್ಯಾರ್ಥಿ ಘಟಕ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ನಿತಿನ್ ಗಡ್ಕರಿ, ಮನೆಯನ್ನು ಸರಿಯಾಗಿ ನೋಡಿಕೊಳ್ಳದವರು ದೇಶವನ್ನು ಸರಿಯಾಗಿ ನೋಡಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಪಕ್ಷದ ಕಾರ್ಯಕರ್ತರು ತಮ್ಮ ಜವಾಬ್ದಾರಿಗಳನ್ನು ಅರಿತು ಕಾರ್ಯನಿರ್ವಹಿಸಬೇಕಾಗಿದೆ ಎಂದಿದ್ದಾರೆ.
ನಾನು ಭೇಟಿ ಮಾಡಿದ ಹಲವು ಮಂದಿ ಬಿಜೆಪಿ ಹಾಗೂ ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಆರ್ಪಿಸುವುದಾಗಿ ಹೇಳುತ್ತಾರೆ. ಆದರೆ, ಅಂತಹ ವ್ಯಕ್ತಿಗಳಲ್ಲಿ ನೀವು ಏನು ಮಾಡುತ್ತಿದ್ದೀರಿ ಮತ್ತು ನಿಮ್ಮ ಮನೆಯಲ್ಲಿ ಎಷ್ಟು ಮಂದಿ ಇರುವರೆಂದು ಕೇಳಿದಾಗ ಮನೆಯಲ್ಲಿ ಹೆಂಡತಿ, ಮಕ್ಕಳಿದ್ದು, ಸರಿಯಾಗಿ ಕಾರ್ಯನಿರ್ವಹಿಸದ ಹಿನ್ನೆಲೆಯಲ್ಲಿ ಶಾಪ್ ಮುಚ್ಚಿರುವುದಾಗಿ ಹೇಳಿದರು. ಮನೆಯನ್ನು ಸರಿಯಾಗಿ ನಿರ್ವಹಣೆ ಮಾಡದವರು, ದೇಶವನ್ನು ಹೇಗೆ ನಿರ್ವಹಣೆ ಮಾಡುತ್ತಾರೆ.ಮೊದಲು ನಿಮ್ಮ ಮನೆ ಬಗ್ಗೆ ಗಮನ ಹರಿಸಿ ಎಂದು ಅವರಿಗೆ ಹೇಳಿದ್ದಾಗಿ ನಿತಿನ್ ಗಡ್ಕರಿ ತಿಳಿಸಿದರು.
ಆದಾಗ್ಯೂ, ಮೊದಲು ನಿಮ್ಮ ಮನೆಯನ್ನು ನಿರ್ವಹಣೆ ಮಾಡಿ, ನಂತರ ನಿಮ್ಮ ಮಕ್ಕಳು, ತದ ನಂತರ ಪಕ್ಷ ಹಾಗೂ ದೇಶಕ್ಕಾಗಿ ಕೆಲಸ ಮಾಡಿ ಎಂದು ನಿತಿನ್ ಗಡ್ಕರಿ ಉಪದೇಶ ಮಾಡಿದರು.