ದೇಶ

ಸಾಕ್ಷ್ಯ ನಾಶ ಮಾಡಿದರೆ, ಪಶ್ಚಾತಾಪ ಪಡುತ್ತೀರಿ: ಕೋಲ್ಕತಾ ಪೊಲೀಸ್ ಆಯುಕ್ತರಿಗೆ 'ಸುಪ್ರೀಂ' ಎಚ್ಚರಿಕೆ

Srinivasamurthy VN
ನವದೆಹಲಿ: ಶಾರದಾ ಚಿಟ್ ಫಂಡ್ ​ ಮತ್ತು ರೋಸ್​ ವ್ಯಾಲಿ ಪಾಂಝಿ ಹಗರಣಕ್ಕೆ ಸಂಬಂಧಿಸಿದಂತೆ ಬಂಧನ ಭೀತಿ ಎದುರಿಸುತ್ತಿರುವ ಕೋಲ್ಕತಾ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ಅವರು, ಸಾಕ್ಷ್ಯಾಧಾರಗಳ ನಾಶಕ್ಕೆ ಯತ್ನಿಸಿದರೆ ಪಶ್ಚಾತಾಪ ಪಡಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಈ ಬಗ್ಗೆ ಇಂದು ನಡೆದ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗಗೋಯ್ ಅವರು ಕೋಲ್ಕತಾ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ಅವರಿಗೆ ಸಾಕ್ಷ್ಯಾಧಾರಗಳ ನಾಶ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ. ಪ್ರಸ್ತತ ಪ್ರಕರಣ ವಿಚಾರಣೆ ಸುಪ್ರೀಂ ಕೇರ್ಟ್ ನಲ್ಲಿದ್ದು, ಸಾಕ್ಷ್ಯಾಧಾರಗಳ ನಾಶಕ್ಕೆ ಯಾರೇ ಯತ್ನಿಸಿದರೂ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇನ್ನು ಇಂದು ನಡೆದ ವಿಚಾರಣೆಯಲ್ಲಿ ರಾಜೀವ್ ಕುಮಾರ್ ಅವರ ಕಚೇರಿಗೆ ತೆರಳಿದ್ದ ಸಿಬಿಐ ಅಧಿಕಾರಿಗಳನ್ನು ಕೋಲ್ಕತಾ ಪೊಲೀಸರು ಬಂಧಿಸಿದ ವಿಚಾರವನ್ನು ಸಾಲಿಸಿಟರ್ ಅಟಾರ್ನಿ ಜನರಲ್ ತುಷಾರ್ ಮೆಹ್ತಾ ಅವರು ಸುಪ್ರೀಂ ಕೋರ್ಟ್ ಗೆ ತಿಳಿಸಿದರು. ಅಲ್ಲದೆ ಅಲ್ಲಾದ ಸಂಪೂರ್ಣ ಘಟನಾವಳಿಗಳನ್ನು ನ್ಯಾಯಪೀಠಕ್ಕೆ ವಿವರಿಸಿದರು. ಅಂತೆಯೇ ಸಿಬಿಐ ಜಂಟಿ ನಿರ್ದೇಶಕರನ್ನು ಗೃಹಬಂಧನದಲ್ಲಿರಿಸುವ ವಿಚಾರವನ್ನೂ ನ್ಯಾಯಪೀಠದ ಗಮನಕ್ಕೆ ತಂದರು. 
ಇದೇ ವೇಳೆ ಮೆಟ್ರೋ ಚಾನಲ್ ಬಳಿ ಸಿಎಂ ಮಮತಾ ಬ್ಯಾನರ್ಜಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಧರಣಿಯಲ್ಲಿ ರಾಜಕೀಯ ಮುಖಂಡರಲ್ಲದೇ ಪಶ್ಚಿಮ ಬಂಗಾಳದ ಸಮವಸ್ತ್ರ ಸಹಿತ ಪೊಲೀಸರೂ ಕೂಡ ಧರಣಿಯಲ್ಲಿ ಪಾಲ್ಗೊಂಡಿದ್ದಾರೆ. ಹೀಗಾಗಿ ಪ್ರಕರಣದಲ್ಲಿ ಸಾಕ್ಷ್ಯಾಧಾರಗಳು ನಾಶವಾಗುತ್ತವೆ ಎಂಬ ಭೀತಿ ತಮಗಿದೆ. ಈ ಬಗ್ಗೆ ನ್ಯಾಯಾಲಯ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿಕೊಂಡರು.
ಬಳಿಕ ಮಾತನಾಡಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗಗೋಯ್ ಅವರು, ಒಂದು ವೇಳೆ ನಿಮ್ಮ ಶಂಕೆಯಂತೆ ಪ್ರಕರಣಕ್ಕೆ ಸಂಬಂಧಿಸಿದ ಯಾವುದೇ ಸಾಕ್ಷ್ಯಾಧಾರಗಳನ್ನು ಯಾರಾದರೂ ನಾಶ ಮಾಡಿದರೆ ಖಂಡಿತಾ ಅವರು ಪಶ್ಚಾತಾಪ ಪಡುತ್ತಾರೆ ಎಂದು ಹೇಳುತ್ತಾ ನ್ಯಾಯಮೂರ್ತಿಗಳು ಪ್ರಕರಣದ ವಿಚಾರಣೆಯನ್ನು ನಾಳೆಗೆ ಮುಂದೂಡಿದರು.
SCROLL FOR NEXT