ನವದೆಹಲಿ: ಡಿಎಂಕೆ ರಾಜ್ಯಸಭಾ ಸದಸ್ಯೆ ಕನಿಮೋಳಿ ಅವರು ತೂತುಕುಡಿಯಿಂದ 2019ರ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂದು ತೂತುಕುಡಿ ಶಾಸಕಿ ಎನ್ ಪಿ ಗೀತಾ ಜೀವನ್ ಅವರು ಹೇಳಿದ್ದಾರೆ.
ಕನಿಮೋಳಿ ಅವರು ಈ ಬಾರಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿದ್ದು, ತೂತುಕುಡಿಯಿಂದ ಕಣಕ್ಕಿಳಿಯಲಿದ್ದಾರೆ ಎಂಬ ವದಂತಿಗಳಿದ್ದವು. ಕನಿಮೋಳಿ ಸಹ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಸುಳಿವು ನೀಡಿದ್ದರು. ಇದೀಗ ಡಿಎಂಕೆ ಶಾಸಕಿ ಗೀತಾ ಜೀವನ್ ಅವರು ಡಿಎಂಕೆ ಯುವ ಘಟಕದ ಕಾರ್ಯದರ್ಶಿಯಾಗಿರುವ ಕನಿಮೋಳಿ ತೂತುಕುಡಿಯಿಂದ ಸ್ಪರ್ಧಿಸಲಿದ್ದಾರೆ ಎಂದು ಹೇಳಿದ್ದಾರೆ.
ಒಂದು ವೇಳೆ ಕನಿಮೋಳಿ ಅವರು ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದರೆ, ಇದು ಅವರು ಎದುರಿಸುತ್ತಿರುವ ಮೊದಲ ಚುನಾವಣೆಯಾಗಲಿದೆ.
ಕಳೆದ 10 ವರ್ಷಗಳಿಂದ ರಾಜ್ಯಸಭಾ ಸದಸ್ಯೆಯಾಗಿರುವ ಕನಿಮೋಳಿ ಅವರು, 2ಜಿ ಸ್ಪೆಕ್ಟ್ರಂ ಹಗರಣದಲ್ಲಿ ಆರೋಪಿಯಾಗಿ, ಸಿಬಿಐ ವಿಶೇಷ ಕೋರ್ಟ್ ನಿಂದ ಖುಲಾಸೆಗೊಂಡಿದ್ದಾರೆ.