ಅಮರಾವತಿ: ಫೆಬ್ರವರಿ 11ರಂದು ದೆಹಲಿಯಲ್ಲಿ ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರು ಹಮ್ಮಿಕೊಂಡಿರುವ ಪ್ರತಿಭಟನೆಗೆ ಬರೊಬ್ಬರಿ 1.12 ಕೋಟಿ ರೂ ವೆಚ್ಚವಾಗಿದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಆಂಧ್ರ ಪ್ರದೇಶ ಆಡಳಿತ ಇಲಾಖೆ ಮಾಹಿತಿ ನೀಡಿದ್ದು, ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರು ದೆಹಲಿಯಲ್ಲಿ ಹಮ್ಮಿಕೊಂಡಿರುವ ಬೃಹತ್ ಪ್ರತಿಭಟನಾ ರ್ಯಾಲಿಗೆ ಸುಮಾರು 1.12 ಕೋಟಿ ರೂ ಹಣ ವೆಚ್ಚವಾಗಿದೆ ಎಂದು ಹೇಳಿದೆ. ಅಲ್ಲದೆ ಪ್ರತಿಭಟನೆಗೆ ಆಂಧ್ರ ಪ್ರದೇಶದಿಂದ ದೆಹಲಿಗೆ ಜನರನ್ನು ಕೊಂಡೊಯ್ಯಲು 2 ವಿಶೇಷ ರೈಲುಗಳನ್ನು ಬುಕ್ ಮಾಡಲಾಗಿದ್ದು, ದಕ್ಷಿಣ ರೈಲ್ವೇ ಇಲಾಖೆಯಿಂದ ತಲಾ 20 ಬೋಗಿಗಳ 2 ರೈಲುಗಳನ್ನು ಬುಕ್ ಮಾಡಲಾಗಿದೆ ಎಂದು ಮಾಹಿತಿ ನೀಡಿದೆ.
ಈ ಎರಡೂ ರೈಲುಗಳು ಫೆಬ್ರವರಿ 10 ಭಾನುವಾರದಂದು ದೆಹಲಿ ತಲುಪಲಿದ್ದು, ಫೆಬ್ರವರಿ 11ರಂದು ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ಅಗ್ರಹಿಸಿ ನಡೆಯುವ ಪ್ರತಿಭಟನೆಯಲ್ಲಿ ಕಾರ್ಯಕರ್ತರು ಭಾಗಿಯಾಗಲಿದ್ದಾರೆ. ಇಲಾಖೆ ಮೂಲಗಳು ನೀಡಿರುವ ಮಾಹಿತಿ ಅನ್ವಯ ಆಂಧ್ರ ಪ್ರದೇಶದ ಅನಂತಪುರ ಹಾಗೂ ಶ್ರೀಕಾಕುಳಂ ಜಿಲ್ಲೆಗಳಿಂದ ಅಪಾರ ಪ್ರಮಾಣದ ಕಾರ್ಯಕರ್ತರು ಮತ್ತು ನಾಯಕರು ದೆಹಲಿಗೆ ತೆರಳಲಿದ್ದಾರೆ ಎನ್ನಲಾಗಿದೆ. ಅಲ್ಲದೆ ಈ ಕಾರ್ಯಕ್ರಮದಲ್ಲಿ ಕೆಲ ಎನ್ ಜಿಒಗಳೂ ಕೂಡ ಪಾಲ್ಗೊಳ್ಳುತ್ತಿದ್ದು, ಫೆಬ್ರವರಿ 11ರಂದು ದೀಕ್ಷಾ ಹೆಸರನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತಿದೆ.
ಇನ್ನು ಸಿಎಂ ನಾಯ್ಡು ಅವರ ಈ ನಡೆ ಇದೀಗ ಆಂಧ್ರ ಪ್ರದೇಶದಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದ್ದು, ಆಂಧ್ರ ಪ್ರದೇದ ಪ್ರಮುಖ ವಿಪಕ್ಷ ವೈಎಸ್ ಆರ್ ಕಾಂಗ್ರೆಸ್ ಪಕ್ಷ ನಾಯ್ಡು ಅವರ ವಿರುದ್ಧ ವಾಗ್ಧಾಳಿ ನಡೆಸಿದೆ. ನಾಯ್ಡು ತಮ್ಮ ಪ್ರಭಾವ ಹೆಚ್ಚಿಸಿಕೊಳ್ಳಲು ಜನರ ದುಡ್ಡನ್ನು ಪೋಲು ಮಾಡುತ್ತಿದ್ದಾರೆ ಎಂದು ಟೀಕೆ ಮಾಡಿದೆ.