ಗುವಾಹತಿ: ಅಸ್ಸಾಂ ರಾಜ್ಯ ಮತ್ತೊಂದು ಕಾಶ್ಮೀರವಾಗಿ ಪರಿವರ್ತನೆಯಾಗಲು ಅವಕಾಶ ನೀಡುವುದಿಲ್ಲ, ಅಕ್ರಮ ವಲಸಿಗರನ್ನು ಅವರ ತವರು ನೆಲಕ್ಕೆ ರವಾನಿಸಲಾಗುತ್ತದೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.
ಅಸ್ಸಾಂನ ಲಖೀಂಪುರದಲ್ಲಿ ನಡೆದ ಭಾರತೀಯ ಜನತಾಪಕ್ಷದ ಯುವಮೋರ್ಚಾ ರ್ಯಾಲಿಯಲ್ಲಿ ಪಾಲ್ಗೊಂಡು ಮಾತನಾಡಿದ ಅಮಿತ್ ಶಾ, ಅಕ್ರಮ ವಲಸಿಗರನ್ನು ಅವರ ತವರು ನೆಲಕ್ಕೆ ವಾಪಸ್ ಕಳುಹಿಸಲಾಗುತ್ತದೆ. ಅಸ್ಸಾಂ ಅನ್ನು ಮತ್ತೊಂದು ಕಾಶ್ಮೀರವಾಗಲು ಬಿಡುವುದಿಲ್ಲ ಎಂದು ಹೇಳಿದರು.
'ಪೌರತ್ವ ತಿದ್ದುಪಡಿ ಮಸೂದೆಯನ್ನು ಅವರು ಬಲವಾಗಿ ಸಮರ್ಥಿಸಿಕೊಂಡರು. ಅಸ್ಸಾಂ ಎರಡನೇ ಕಾಶ್ಮೀರವಾಗುವುದನ್ನು ತಡೆಯುವ ಸಲುವಾಗಿ ಈ ಮಸೂದೆ ಮಂಡಿಸಲಾಗಿದೆ ಎಂದು ಹೇಳಿದರು. ಅಂತೆಯೇ ರಾಜ್ಯಸಭೆಯಲ್ಲಿ ಪೌರತ್ವ ತಿದ್ದುಪಡಿ ಮಸೂದೆ ಆಂಗೀಕಾರವಾಗದಿರುವ ಬಗ್ಗೆ ಉಲ್ಲೇಖಿಸಿದ ಅವರು, ಅಸ್ಸಾಂನ ಗುರುತಿಗೆ ಒದಗಿರುವ ಅಪಾಯವನ್ನು ತಡೆಯುವುದು ಈ ಮಸೂದೆಯ ಉದ್ದೇಶವಾಗಿದೆ ಎಂದು ಹೇಳಿದರು.
ವಿವಾದಿತ ಎನ್ಆರ್ಸಿ ಬಗ್ಗೆ ಪ್ರಸ್ತಾಪಿಸಿದ ಅವರು, ಪ್ರಧಾನಿ ನರೇಂದ್ರ ಮೋದಿ ಮತ್ತೆ ಅಧಿಕಾರಕ್ಕೆ ಬಂದ ಬಳಿಕ ಬಿಜೆಪಿ ಈ ಮಸೂದೆಯನ್ನು ಮತ್ತೆ ತರಲಿದೆ. ಇದು ನಮ್ಮ ಬದ್ಧತೆ. ನುಸುಳುಕೋರರಿಗೆ ಅಸ್ಸಾಂನಲ್ಲಿ ಅವಕಾಶವಿಲ್ಲ. ಅಗತ್ಯಬಿದ್ದರೆ ಎನ್ಆರ್ಸಿ ಪರಿಷ್ಕರಿಸಿ, ನುಸುಳುಕೋರರನ್ನು ಪತ್ತೆ ಹಚ್ಚಿ ಗಡೀಪಾರು ಮಾಡಲು ಸಿದ್ಧ ಎಂದು ಘೋಷಿಸಿದರು.
"ಕಾಶ್ಮೀರವಾಗಲೀ, ಈಶಾನ್ಯವಾಗಲೀ ನಮ್ಮ ಸರ್ಕಾರ ಭಯೋತ್ಪಾದನೆಯನ್ನು ಬೇರು ಸಹಿತ ಕಿತ್ತುಹಾಕಲಿದೆ. ಏಕೆಂದರೆ ಕೇಂದ್ರದಲ್ಲಿ ಇರುವುದು ನರೇಂದ್ರ ಮೋದಿ ಸರ್ಕಾರ, ಕಾಂಗ್ರೆಸ್ ಸರ್ಕಾರವಲ್ಲ. ಮೋದಿ ಬಳಿ ಇಂಥ ಎಲ್ಲ ಕೃತ್ಯಗಳಿಗೂ ಉತ್ತರವಿದೆ. ಪುಲ್ವಾಮದಲ್ಲಿ ನಡೆದ ಸಿಆರ್ಪಿಎಫ್ ಜವಾನರ ಬಲಿದಾನ ವ್ಯರ್ಥವಾಗುವುದಿಲ್ಲ ಎಂದು ಅಮಿತ್ ಶಾ ಹೇಳಿದ್ದಾರೆ.