ನವದೆಹಲಿ: ಸಾಮಾಜಿಕ ಮಾಧ್ಯಗಳಲ್ಲಿ ಪತ್ರಕರ್ತೆ ಬರ್ಖಾ ದತ್ ಅವರಿಗೆ ಕಿರುಕುಳ ನೀಡುತ್ತಿರುವ ಆರೋಪದ ಬಗ್ಗೆ ಶೀಘ್ರ ತನಿಖೆ ನಡೆಸುವಂತೆ ರಾಷ್ಟ್ರೀಯ ಮಹಿಳಾ ಆಯೋಗ(ಎನ್ ಸಿ ಡಬ್ಲ್ಯೂ) ಮಂಗಳವಾರ ದೆಹಲಿ ಪೊಲೀಸ್ ಆಯುಕ್ತ ಅಮುಲ್ಯ ಪಟ್ನಾಯಕ್ ಅವರಿಗೆ ಸೂಚಿಸಿದೆ.
ಈ ಸಂಬಂಧ ದೆಹಲಿ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿರುವ ಎನ್ ಸಿ ಡಬ್ಲ್ಯೂ, ಬರ್ಖಾದತ್ ಅವರು, ಅಭದ್ರತೆಯ ಭಾವ ಎದುರಿಸುತ್ತಿರುವ ಯಾವುದೇ ಕಾಶ್ಮೀರಿಗಳ ಸಹಾಯಕ್ಕಾಗಿ ತಮ್ಮ ಮನೆಯ ಬಾಗಿಲು ಎಂದಿಗೂ ತೆರೆದಿರುತ್ತದೆ ಎಂದು ಹೇಳಿದ ನಂತರ ವಾಟ್ಸ್ ಆಫ್ ಮೂಲಕ ಹಾಗೂ ಟ್ವಿಟ್ಟರ್ ನಲ್ಲಿ ಅವರಿಗೆ ಬೆದರಿಕೆ ಕರೆಗಳು ಬರುತ್ತಿವೆ ಮತ್ತು ಅಶ್ಲೀಲ ಫೋಟೊ ಕಳಿಸುವ ಮೂಲಕ ಕಿರುಕುಳ ನೀಡುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಕುರಿತು ತ್ವರಿತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ.
ಇನ್ನು ದೆಹಲಿ ಪೊಲೀಸರಿಗೆ ಪತ್ರ ಬರೆದು ಕ್ರಮಕ್ಕೆ ಸೂಚಿಸಿರುವ ಎನ್ ಸಿಡಬ್ಲ್ಯೂ ಗೆ ಬರ್ಖಾ ದತ್ ಧನ್ಯವಾದ ಹೇಳಿದ್ದಾರೆ.
ತಮಗೆ ಬರುತ್ತಿದ್ದ ಸಂದೇಶದ ಬಗ್ಗೆ ಬರ್ಖಾ ದತ್ ಅವರು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದರು.
ಬರ್ಖಾದತ್ ಗೆ ಬೆದರಿಕೆ ಬಂದಿರುವುದನ್ನು ಹಲವರು ಖಂಡಿಸಿದ್ದರೆ, ಇನ್ನೂ ಕೆಲವರು "ಅಶ್ಲೀಲ ಸಂದೇಶ, ಬೆದರಿಕೆ ಹಾಕಿದವರನ್ನು ಕ್ಷಮಿಸಿಬಿಡಿ, ಶಿಕ್ಷೆಗೆ ಆಗ್ರಹಿಸಬೇಡಿ, ದ್ವೇಶ ಮಾಡಬೇಡಿ, ಶಾಂತಿಯುತವಾಗಿ, ಪ್ರೀತಿಯಿಂದ ಮಾತನಾಡಿ ಬಗೆಹರಿಸಿಕೊಳ್ಳಿ ಎಂದು ವ್ಯಂಗ್ಯ ಧಾಟಿಯಲ್ಲಿ ಸಲಹೆ ನೀಡಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos