ನವದೆಹಲಿ: ಮುಂಬರುವ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಪಾಕಿಸ್ತಾನದ ವಿರುದ್ಧದ ಪಂದ್ಯಗಳನ್ನು ಭಾರತ ತಂಡ ಬಹಿಷ್ಕರಿಸಿದರೆ, ಅದು ಯುದ್ಧವನ್ನೇ ಮಾಡದೆ ಸೊಲೊಪ್ಪಿಕೊಂಡಂತಾಗುತ್ತದೆ ಎಂದು ಮಾಜಿ ಕೇಂದ್ರ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಶಶಿತರೂರ್ ಹೇಳಿದ್ದಾರೆ.
ದೇಶಾದ್ಯಂತ ಪುಲ್ವಾಮ ಉಗ್ರ ದಾಳಿ ಪ್ರಕರಣಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದು, ಇದೇ ಸಂದರ್ಭದಲ್ಲಿ ಟೀಂ ಇಂಡಿಯಾ ಮುಂಬರುವ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನದ ವಿರುದ್ಧ ಪಂದ್ಯವನ್ನು ಆಡದೇ ಬಹಿಷ್ಕರಿಸಬೇಕು ಎಂಬ ಆಗ್ರಹಗಳೂ ಕೂಡ ಕೇಳಿಬರುತ್ತಿವೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಕ್ರಿಕೆಟಿಗರು, ರಾಜಕಾರಣಿಗಳು, ಪರ ವಿರೋಧ ಹೇಳಿಕೆಗಳನ್ನು ನೀಡುತ್ತಿದ್ದು, ಈ ಪಟ್ಟಿಗೆ ಇದೀಗ ಕಾಂಗ್ರೆಸ್ ಮುಖಂಡ ಶಶಿತರೂರ್ ಅವರೂ ಕೂಡ ಸೇರಿದ್ದಾರೆ.
ಅವರ ಪ್ರಕಾರ ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಪಾಕಿಸ್ತಾನ ತಂಡವನ್ನು ಎದುರಿಸಿ ಹೀನಾಯವಾಗಿ ಸೋಲಿಸಬೇಕು. ಆ ಮೂಲಕ ಪುಲ್ವಾಮ ಉಗ್ರ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಗೌರವ ಸಲ್ಲಿಕೆ ಮಾಡಬೇಕು ಎಂದು ಹೇಳಿದ್ದಾರೆ. ಅಂತೆಯೇ ತಮ್ಮ ವಾದಕಕ್ಕೆ 1999ರ ಕಾರ್ಗಿಲ್ ಯುದ್ಧದ ಉದಾಹರಣೆ ನೀಡಿರುವ ತರೂರ್, ಕಾರ್ಗಿಲ್ ಯುದ್ಧದ ಸಂದರ್ಭದಲ್ಲೂ ಭಾರತ ತಂಡ ಪಾಕ್ ವಿರುದ್ಧ ಪಂದ್ಯವನ್ನಾಡಿತ್ತು. ಜಯಶಾಲಿ ಕೂಡ ಆಗಿತ್ತು.
ಅಂತಹುದೇ ಸಂದರ್ಭ ಈಗಲೂ ಎದುರಾಗಿದ್ದು, ಇದು ಕೇವಲ 2 ಅಂಕಗಳ ವಿಚಾರವಲ್ಲ. ಬದಲಿಗೆ ಭಾರತದ ಗೌರವದ ಪ್ರಶ್ನೆಯಾಗಿದೆ. ಇದು ಯುದ್ಧವನ್ನೇ ಮಾಡದೇ ಸೋಲು ಒಪ್ಪಿಕೊಂಡಂತಾಗುತ್ತದೆ ಎಂದು ಹೇಳಿದ್ದಾರೆ.
ಇದೇ ವೇಳೆ ಕೇಂದ್ರ ಸರ್ಕಾರದ ವಿರುದ್ಧವೂ ವಾಗ್ದಾಳಿ ನಡೆಸಿರುವ ಶಶಿ ತರೂರ್, 44 ಯೋಧರು ಹುತಾತ್ಮರಾಗಿದ್ದಾರೆ. ಆದರೆ ಈ ಬಗ್ಗೆ ತಲೆಕೆಡಿಸಿಕೊಳ್ಳದ ಕೇಂದ್ರ ಸರ್ಕಾರ ಕನಿಷ್ಠ ಪಕ್ಷ ರಾಷ್ಟ್ರೀಯ ಶೋಕಾಚರಣೆಯನ್ನೂ ಘೋಷಣೆ ಮಾಡಿಲ್ಲ. ಆದರೆ ಮೂರು ತಿಂಗಳ ಬಳಿಕ ಇರುವ ಭಾರತ-ಪಾಕ್ ಪಂದ್ಯ ನಿಷೇಧಕ್ಕೆ ಚಿಂತನೆಯಲ್ಲಿ ತೊಡಗಿದೆ. ಇದೇ ಏನು ನೀವು ಸೈನಿಕರಿಗೆ ನೀಡುವ ಗೌರವ. ಬಿಜೆಪಿ ತನ್ನ ಸ್ವಾರ್ಥಕ್ಕಾಗಿ ದೇಶವನ್ನು ಇಬ್ಭಾಗ ಮಾಡ ಹೊರಟಿದೆ ಎಂದೂ ತರೂರ್ ಹೇಳಿದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos