ನವದೆಹಲಿ: ದೆಹಲಿಯ ಇಂಡಿಯಾ ಗೇಟ್ ಹಾಗೂ ಅಮರ್ ಜವಾನ್ ಜ್ಯೋತಿ ಸಮೀಪ ರಾಷ್ಟ್ರೀಯ ಯುದ್ಧ ಸ್ಮಾರಕ ನಿರ್ಮಾಣ ಆಗಿದೆ ನಾಳೆ (ಫೆ.25) ಅದನ್ನು ದೇಶಕ್ಕೆ ಸಮರ್ಪಿಸಲಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಪ್ರಧಾನ ಮಂತ್ರಿ ಮೋದಿ ತಮ್ಮ 53ನೇ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ್ದಾರೆ.
ಇದು ಈ ವರ್ಷ ಪ್ರಧಾನಿ ಮೋದಿಯವರ ಎರಡನೇ ಮನ್ ಕಿ ಬಾತ್ ಕಾರ್ಯಕ್ರಮವಾಗಿದೆ. ಅಲ್ಲದೆ ದೇಶವನ್ನು ಬೆಚ್ಚಿ ಬೀಳಿಸಿದ್ದ ಪುಲ್ವಾಮಾ ಭಯೋತ್ಪಾದಕ ದಾಳಿ ಬಳಿಕ ಇದು ಮೋದಿಯವರ ಮೊದಲ ಮನ್ ಕಿ ಬಾತ್ ಕಾರ್ಯಕ್ರಮವಾಗಿದೆ.
"ನಮ್ಮ ಸಶಸ್ತ್ರ ಪಡೆಗಳು ಯಾವಾಗಲೂ ಸರಿಸಾಟಿಯಿಲ್ಲದ ಧೈರ್ಯ ಮತ್ತು ಸ್ಥೈರ್ಯವನ್ನು ಪ್ರದರ್ಶಿಸಿದೆ.ಒಂದೆಡೆ ಅವರು ಶಾಂತಿಯನ್ನು ಮರುಸ್ಥಾಪಿಸುವಲ್ಲಿ ಸತತ ಪ್ರಯತ್ನದಲ್ಲಿದ್ದಾರೆ. ಆದರೆ ಇದೇ ವೇಳೆ ಭಯೋತ್ಪಾದಕರಿಗೆ ಅವರದೇ ಭಾಷೆಯಲ್ಲಿ ಉತ್ತರ ನೀಡಿದ್ದಾರೆ." ಪ್ರಧಾನಿ ಹೇಳಿದ್ದಾರೆ.
"ಹತ್ತು ದಿನಗಳ ಕೆಳಗೆ ನಮ್ಮ ಮಾತೃಭೂಮಿ ಹಲವು ವೀರ ಯೋಧರನ್ನು ಕಳೆದುಕೊಂಡಿದೆ. ಇದರಿಂದ ದೇಶಾದ್ಯಂತ ಜನರು ತೀವ್ರ ಸಂತಾಪ ಸೂಚಿಸಿದ್ದಲ್ಲದೆ ಪ್ರತೀಕಾರಕ್ಕಾಗಿ ತೀವ್ರ ಆಕ್ರೋಶವನ್ನೂ ವ್ಯಕ್ತಪಡಿಸಿದ್ದಾರೆ. ಹುತಾತ್ಮರು ಮತ್ತು ಅವರ ಕುಟುಂಬದವರ ಬೆಂಬಲಕ್ಕೆ ಇಡೀ ದೇಶದ ಜನತೆ ನಿಂತಿದೆ.
"ಭಾರತ ಸ್ವಾತಂತ್ರಗಳಿಸಿಕೊಂಡ ಬಳಿಕ ಇಷ್ಟು ವರ್ಷದಲ್ಲಿಯೂ ನಮ್ಮಲ್ಲಿ ಯಾವುದೇ ರಾಷ್ಟ್ರೀಯ ಯುದ್ಧ ಸ್ಮಾರಕಗಳಿಲ್ಲ. ಇದು ನನಗೆ ಅಚ್ಚರಿ ಹಾಗೂ ನೋವನ್ನುಂಟು ಮಾಡಿದೆ. ಆದರೆ ಈಗ ಇಡೀ ದೇಶವೇ ಕಾಯುತ್ತಿದ್ದ ಆ ಕ್ಷಣ ಬಂದಿದೆ.ನವೀನ ರಾಷ್ಟ್ರೀಯ ಯುದ್ಧ ಸ್ಮಾರಕವು ದೆಹಲಿಯ ಇಂಡಿಯಾ ಗೇಟ್ ಮತ್ತು ಅಮರ್ ಜವಾನ್ ಜ್ಯೋತಿ ಸಮೀಪ ನಿರ್ಮಾಣವಾಗಿದ್ದು ನಾಳೆ (ಸೋಮವಾರ) ಇದನ್ನು ದೇಶಕ್ಕೆ ಸಮರ್ಪಿಸಲಿದ್ದೇನೆ" ಪ್ರಧಾನಿ ಹೇಳಿದ್ದಾರೆ.
ತಮ್ಮ ರೇಡಿಯೋ ಪ್ರಸಾರದ ಕಡೆಯ ಆವೃತ್ತಿಯಲ್ಲಿ ಮೋದಿ ನಿರಂತರವಾಗಿ ಪ್ರಜಾಪ್ರಭುತ್ವವನ್ನು ಬಲಪಡಿಸುವ ಸಲುವಾಗಿ ಭಾರತ ಚುನಾವಣಾ ಆಯೋಗದ ಕೊಡುಗೆಯನ್ನು ಪ್ರಶಂಸಿಸಿದ್ದಾರೆ. ಅಲ್ಲದೆ 18 ವರ್ಷ ಮೇಲ್ಪಟ್ಟವರನ್ನು ಮತದಾನದ ಪಟ್ಟಿಗೆ ನೊಂದಾಯಿಸಿಕೊಳ್ಳಬೇಕೆಂದು ಒತ್ತಾಯಿಸಿದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos