ಭಾರತದ ಮೇಲೆ ದಾಳಿ ನಡೆಸಲು ಯತ್ನಿಸಿದರೂ ಮತ್ತೆ ಪಾಕ್ ಪರ ನಿಂತ ನವಜೋತ್ ಸಿಂಗ್ ಸಿಧು!
ನವದೆಹಲಿ: ಪಾಕಿಸ್ತಾನ ಗಡಿಯಲ್ಲಿ ಭಯೋತ್ಪಾದನೆಯನ್ನು ಉತ್ತೇಜಿಸಿ ಯೋಧರನ್ನು ಹತ್ಯೆ ಮಾಡುತ್ತಿದ್ದರೂ ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ಪಾಕಿಸ್ತಾನದ ಪರ ಮತ್ತೊಮ್ಮೆ ಹೇಳಿಕೆ ನೀಡಿದ್ದಾರೆ.
ಪುಲ್ವಾಮ ದಾಳಿಯ ನಂತರ ಪಾಕಿಸ್ತಾನದ ಬಗ್ಗೆ ಹೇಳಿಕೆ ನೀಡಿದ್ದ ನವಜೋತ್ ಸಿಂಗ್ ಸಿಧುಗೆ ಛೀ ಮಾರಿ ಹಾಕಲಾಗಿತ್ತು. ಆದರೆ ಅದರಿಂದ ಎಚ್ಚೆತ್ತುಕೊಳ್ಳದ ನವಜೋತ್ ಸಿಂಗ್ ಸಿಧು, ಮತ್ತೊಮ್ಮೆ ತಮ್ಮ ಪಾಕ್ ಪ್ರೀತಿಯನ್ನು ಪ್ರದರ್ಶಿಸಿದ್ದಾರೆ.
ಭಾರತ-ಪಾಕಿಸ್ತಾನದ ನಡುವೆ ಉಂಟಾಗಿರುವ ಪ್ರಕ್ಷುಬ್ಧ ಪರಿಸ್ಥಿತಿಯ ಬಗ್ಗೆ ಪತ್ರ ಪ್ರಕಟಿಸಿರುವ ನವಜೋತ್ ಸಿಂಗ್ ಸಿಧು, ಶಾಂತಿಯೇ ಇವೆಲ್ಲದಕ್ಕೂ ಪರಿಹಾರ ಎಂದು ಹೇಳಿದ್ದಾರೆ.
ನಮ್ಮ ಬಳಿ ಆಯ್ಕೆ ಇದೆ, ಆದರೆ ಅತ್ಯಂತ ಕಠಿಣ ಕ್ರಮ ಕೈಗೊಳ್ಳುವುದರಿಂದಲೇ ರಕ್ಷಣ ಮತ್ತು ಸಮರ್ಥನೆ ಸಾಧ್ಯವೆಂದು ಚಿಂತಿಸಿದರೆ, ರಕ್ಷಣೆ ಮರೀಚಿಕೆಯಾಗಲಿದೆ ಎಂದು ನವಜೋತ್ ಸಿಂಗ್ ಸಿಧು ಹೇಳಿದ್ದಾರೆ.
ಹುತಾತ್ಮ ಯೋಧರ ಕುಟುಂಬ ಸದಸ್ಯರ ಮುಖದಲ್ಲಿ ನೋವನ್ನು ಕಂಡಿದ್ದೇನೆ, ವಿಧ್ವಂಸಕಾರಿಯಾಗಿ ಯೋಚನೆ ಮಾಡುವುದು ಸುಲಭ ಆದರೆ ಅದು ನಮ್ಮನ್ನು ಸುರಕ್ಷಿತವಾಗಿಸುವುದಿಲ್ಲ. ನಮ್ಮ ಹೋರಾಟವೇನಿದ್ದರೂ ಭಯೋತ್ಪಾದನೆ ವಿರುದ್ಧ ಹಾಗೂ ಮಾನವಿಯತೆಯ ಶತ್ರುಗಳ ವಿರುದ್ಧ, ನಮ್ಮ ಹೋರಾಟ ಕಾಶ್ಮೀರಿಗಳ ಪರವಾಗಿಯೆ ಹೊರತು ಕಾಶ್ಮೀರದ ವಿರುದ್ಧವಾಗಿ ಅಲ್ಲ ಎಂದು ಪ್ರಧಾನಿ ಮೋದಿ ಸಹ ಹೇಳಿದ್ದಾರೆ.
ನಾನು ಪಾಕಿಸ್ತಾನದ ಜೊತೆ ಮಾತುಕತೆ ನಡೆಸಬೇಕೆಂಬ ನನ್ನ ಅಭಿಪ್ರಾಯಕ್ಕೆ ಈಗಲೂ ಬದ್ಧನಾಗಿದ್ದೇನೆ, ಸಮಸ್ಯೆಗೆ ಶಾಂತಿಯೇ ಪರಿಹಾರವೇ ಹೊರತು ಭಯ, ದ್ವೇಶಗಳಲ್ಲ ಎಂದು ನವಜೋತ್ ಸಿಂಗ್ ಸಿಧು ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos