ನವದೆಹಲಿ: ರಫೇಲ್ ಯುದ್ಧ ವಿಮಾನ ಖರೀದಿ ಕುರಿತು ಕಾಂಗ್ರೆಸ್ ಬಿಡುಗಡೆ ಮಾಡಿರುವ ಆಡಿಯೋ ನಕಲಿ ಎಂದು ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರಿಗೆ ಗೋವಾ ಆರೋಗ್ಯ ಸಚಿವ ವಿಶ್ವಜಿತ್ ರಾಣೆಯವರು ಬುಧವಾರ ಪತ್ರ ಬರೆದಿದ್ದಾರೆ.
ವಿವಾದ ಕುರಿತಂತೆ ಪ್ರತಿಕ್ರಿಯೆ ನೀಡಿರುವ ರಾಣೆಯವರು, ಕಾಂಗ್ರೆಸ್ ಬಿಡುಗಡೆ ಮಾಡಿರುವ ಆಡಿಯೋ ಕ್ಲಿಪ್ ಗಳು ನಕಲಿಯಾಗಿವೆ. ಒಬ್ಬ ಸಚಿವ ಹಾಗೂ ಮುಖ್ಯಮಂತ್ರಿಗಳ ನಡುವಿನ ಸಂಭಾಷಣೆ ಕುರಿತು ತಪ್ಪು ಮಾಹಿತಿಗಳನ್ನು ಪಸರಿಸಲು ಕಾಂಗ್ರೆಸ್ ಇಂತಹ ಕೀಳು ಮಟ್ಟಕ್ಕಿಳಿದಿದೆ. ರಫೇಲ್ ಬಗ್ಗೆಯಾಗಲೀ ಅಥವಾ ಯಾವುದೇ ದಾಖಲೆಗಳ ಬಗ್ಗೆಯಾಗಲೀ ಪರಿಕ್ಕರ್ ಅವರು ಯಾವುದೇ ಹೇಳಿಕೆಗಳನ್ನೂ ನೀಡಿಲ್ಲ. ಪ್ರಕರಣ ಸಂಬಂಧ ತನಿಖೆಗೆ ಆದೇಶಿಸುವಂತೆ ಮನವಿ ಮಾಡಿಕೊಂಡಿದ್ದೇನೆಂದು ಹೇಳಿದ್ದಾರೆ.
ರಫೇವಲ್ ವಿವಾದ ಕುರಿತಂತೆ ಕಾಂಗ್ರೆಸ್ ಬಿಡುಗಡೆ ಮಾಡಿರುವ ಆಡಿಯೋ ಕ್ಲಿಪ್ ವೈರಲ್ ಆಗುತ್ತಿದೆ. ಆಡಿಯೋ ಕ್ಲಿಪ್ ನಲ್ಲಿರುವಂತೆ ನಾನು ಯಾವುದೇ ವ್ಯಕ್ತಿಯೊಂದಿಗೂ ಮಾತನಾಡಿಲ್ಲ. ಪ್ರಕರಣ ಸಂಬಂಧ ತನಿಖೆಯ ಅಗತ್ಯವಿದೆ. ಕಾಣದ ಶಕ್ತಿಗಳು ಇದರ ಹಿಂದೆ ಇವೆ ಎಂಬುದನ್ನು ಮುಖ್ಯಮಂತ್ರಿಗಳಿಗೆ ಮತ್ತೊಮ್ಮೆ ಹೇಳಲು ಬಯಸುತ್ತೇನೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ವಿರುದ್ಧ ಪರಿಕ್ಕರ್ ಕಿಡಿ
ವಿವಾದ ಕುರಿತಂತೆ ಗೋವಾ ಮುಖ್ಯಮಂತ್ರಿ ಪರಿಕ್ಕರ್ ಅವರೂ ಕೂಡ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿದ್ದು, ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.
ರಫೇಲ್ ವಿವಾದ ಕುರಿತಂತೆ ಸುಪ್ರೀಂಕೋರ್ಟ್ ತೀರ್ಪು ನೀಡಿದ ಬಳಿಕ ಕಾಂಗ್ರೆಸ್ ಹತಾಶೆಗೊಂಡಿದ್ದು, ಈ ಹತಾಶೆಯಲ್ಲಿಯೇ ಸತ್ಯಗಳನ್ನು ತಿರುಚುವ ಪ್ರಯತ್ನಗಳನ್ನು ಮಾಡಿದೆ. ಕಾಂಗ್ರೆಸ್ ಸುಳ್ಳುತನ ಇದೀಗ ಬಹಿರಂಗಗೊಂಡಿದೆ. ಸಚಿವ ಸಂಪುಟ ಸಭೆಯಲ್ಲಿ ಇಂತಹ ಯಾವುದೇ ಚರ್ಚೆಗಳೂ ನಡೆದಿಲ್ಲ ಎಂದಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos