ಹೈದರಾಬಾದ್: ತೆಲಂಗಾಣ ರಾಷ್ಟ್ರ ಸಮಿತಿಯ ಮುಖ್ಯಸ್ಥ, ತೆಲಂಗಾಣದ ಮುಖ್ಯಮಂತ್ರಿಯೂ ಆಗಿರುವ ಕೆ. ಚಂದ್ರಶೇಖರ್ ರಾವ್ ತಾವು ಇದೇ ಜನವರಿ 19ರಂದು ಕೋಲ್ಕತ್ತಾದಲ್ಲಿ ನಡೆಯಲಿರುವ ತೃಣಮೂಲ ಕಾಂಗ್ರೆಸ್ ನೇತೃತ್ವದ ಬಿಜೆಪಿ ವಿರೋಧಿ ಪಕ್ಷಗಳ ರ್ಯಾಲಿಯಲ್ಲಿ ಕಾಂಗ್ರೆಸ್ ನೊಡನೆ ವೇದಿಕೆ ಹಂಚಿಕೊಳ್ಳುವುದಕ್ಕೆ ಬಯಸುವುದಿಲ್ಲ ಎಂದು ಹೇಳಿದ್ದಾರೆ
ಕೆಸಿಆರ್ ಇತ್ತೀಚಿನ ದಿನದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯನ್ನು ಭೇಟಿಯಾಗಿ 'ಕಾಂಗ್ರೆಸ್ಸೇತರ, ಹಾಗೂ ಬಿಜೆಪಿಯೇತರ’ ಪ್ರಾದೇಶಿಕ ಪಕ್ಷಗಳ 'ಗುಂಪಿನ ರಚನೆ ಕುರಿತು ಒತ್ತಾಯಿಸಿದ್ದರು.
ಕಳೆದ ಡಿಸೆಂಬರ್ 24ರಂದು ಕೋಲ್ಕತ್ತಾದಲ್ಲಿ ನಡೆದ ಸಭೆಯ ಬಳಿಕ ತೆಲಂಗಾಣ ಮುಖ್ಯಮಂತ್ರಿಯು ಮಾಧ್ಯಮಗಳೊಡನೆ ಮಾತನಾಡಿ ಮಮತಾ ಅವರು ಕಾಂಗ್ರೆಸ್ ಪಕ್ಷದ ಹೊರತು "ಮಹಾಮೈತ್ರಿ" ರಚಿಸುವ ಬಗ್ಗೆ ಯಾವುದೇ ಸ್ಪಷ್ಟ ಮಾತುಗಳನ್ನಾಡಿಲ್ಲ ಎಂದು ಹೇಳಿದ್ದರು.
ಈ ಕುರಿತಂತೆ ಪಿಟಿಐ ಜತೆ ಮಾತನಾಡಿದ ಟಿಆರ್ ಎಸ್ ಪಕ್ಷದ ಉಪ ಮುಖ್ಯಸ್ಥ ಬಿ. ವಿನೋದ್ ಕುಮಾರ್ "ಕೆಸಿಆರ್ ಅವರಿಗೆ ರ್ಯಾಲಿಗೆ ಆಹ್ವಾನ ಸಿಕ್ಕಿದೆಯೆ ಇಲ್ಲವೆ ನನಗೆ ತಿಳಿದಿಲ್ಲ.ಅಲ್ಲದೆ ರಾಹುಲ್ ಗಾಂಧಿ ಹಾಜರಾಗಲಿರುವ ರ್ಯಾಲಿಯಲ್ಲಿ ಕೆಸಿಆರ್ ಹಾಜರಾಗುತ್ತಾರೆಯೆ ಎನ್ನುವುದು ಸಹ ನನಗೆ ತಿಳಿದಿಲ್ಲ" ಎಂದಿದ್ದಾರೆ.
ಟಿಆರ್ ಎಸ್ ಪಕ್ಷಕ್ಕೆ ತೆಲಂಗಾಣದಲ್ಲಿ ಕಾಂಗ್ರೆಸ್ ಅತಿ ದೊಡ್ಡ ವಿರೋಧ ಪಕಷವಾಗಿದೆ. ಕಳೆದ ವರ್ಷ ತೆಲಂಗಾಣ ವಿಧಾನಸಭೆ ಚುನಾವಣೆ ವೇಳೆ ಕೆಸಿಆರ್ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಅವರನ್ನು ದೇಶದ ದೊಡ್ಡ ಬಫೂನ್ ಎಂದು ಕರೆದಿದ್ದರು. ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಟಿಆರ್ ಎಸ್ ಪಕ್ಷ 119 ಸ್ಥಾನಗಳ ಪೈಕಿ 88 ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೆ ಮರಳಿದೆ. ಕಾಂಗ್ರೆಸ್ 19 ಸ್ಥಾನವಷ್ಟೇ ಗಳಿಸಿದೆ. ಇನ್ನು ಕೇಂದ್ರದ ಚುಕ್ಕಾಣಿ ಹಿಡಿದಿರುವ ಭಾರತೀಯ ಜನತಾ ಪಕ್ಷ ಕೇವಲ ಒಂದು ಸ್ಥಾನದಲ್ಲಿ ಜಯ ಸಾಧಿಸಿತ್ತು.
ಇನ್ನು ಇತ್ತೀಚೆಗೆ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಸಹ ಕೆಸಿಆರ್ ವರನ್ನು ಭೇಟಿಯಾಗಿದ್ದರು. ಪಟ್ನಾಯಕ್ ಬುಧವಾರವಷ್ಟೇ ತಾವು ಕಾಂಗ್ರೆಸ್ ಹಾಗೂ ಬಿಜೆಪಿ ಜತೆ ಸಮಾನ ಅಂತರ ಕಾಯ್ದುಕೊಳ್ಳುತ್ತೇವೆ ಎಂದಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos