ನವದೆಹಲಿ: ರಾಫೆಲ್ ಹಗರಣವನ್ನು ಮುಚ್ಚಿಹಾಕಲು ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ಅಧಿಕಾರಿಗಳ ಮತ್ತು ಇತರ ಉನ್ನತ ಹುದ್ದೆಯಲ್ಲಿರುವ ವ್ಯಕ್ತಿಗಳ ಮೇಲೆ ಒತ್ತಡದ ತಂತ್ರಗಾರಿಕೆ ಅನುಸರಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ.
ಅತ್ತ ಅಲೋಕ್ ವರ್ಮಾ ವಜಾ ಬೆಂಬಲಿಸಿದ್ದ ನ್ಯಾ.ಎಕೆ ಸಿಕ್ರಿ ಅವರಿಗೆ ಕೇಂದ್ರ ಸರ್ಕಾರ ಉನ್ನತ ಹುದ್ದೆ ಅವಕಾಶ ನೀಡಿದ ಬೆನ್ನಲ್ಲೇ ರಾಹುಲ್ ಗಾಂಧಿ ಈ ಕುರಿತು ಟ್ವೀಟ್ ಮಾಡಿದ್ದು, ಅಧಿಕಾರಿಗಳನ್ನು ಮತ್ತು ಇತರೆ ಉನ್ನತ ಹುದ್ದೆಗಳಲ್ಲಿರುವ ವ್ಯಕ್ತಿಗಳ ಮೇಲೆ ಒತ್ತಡ ಹೇರುವ ಮೂಲಕ ಪ್ರಧಾನಿ ಮೋದಿ ರಾಫೆಲ್ ಹಗರಣವನ್ನು ಮುಚ್ಚಿಹಾಕಲು ಯತ್ನಿಸುತ್ತಿದ್ದಾರೆ. ಭ್ರಷ್ಟಾಚಾರ ರಹಿತ ಸರ್ಕಾರವೆಂದು ಹೇಳಿಕೊಳ್ಳುತ್ತಿರುವ ಪ್ರಧಾನಿ ಮೋದಿ ತಮ್ಮ ಅವಧಿಯಲ್ಲಾಗಿರುವ ದೇಶದ ಅತೀ ದೊಡ್ಡ ಭ್ರಷ್ಟಾಚಾರ ಹಗರಣವನ್ನು ಮುಚ್ಚಿಹಾಕಲು ಯತ್ನಿಸುತ್ತಿದ್ದಾರೆ. ಇದೇ ಕಾರಣಕ್ಕೆ ಅಲೋಕ್ ವರ್ಮಾ ಅವರ ವಜಾಗೆ ಬೆಂಬಲಿಸಿದ್ದ ನ್ಯಾಯಮೂರ್ತಿ ಎಕೆ ಸಿಕ್ರಿ ಅವರಿಗೆ CSAT ಹುದ್ದೆ ಆಮಿಶ ಒಡ್ಡಿದ್ದಾರೆ ಎಂದು ಆರೋಪಿಸಿದ್ದಾರೆ.
ಅಂತೆಯೇ ನ್ಯಾ.ಎಕೆ ಸಿಕ್ರಿ ಅವರ ನಿರ್ಣಯ ಅವರ ಸ್ವಂತದಲ್ಲ. ಅದು ಒತ್ತಡದಿಂದ ನೀಡಿದ ನಿರ್ಣಯವಾಗಿತ್ತು ಎಂದು ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.